ಅಜ್ಜಂಪುರ: ತಾಲ್ಲೂಕಿನ ಭಕ್ತನ ಕಟ್ಟೆ, ಹುಚ್ಚೇನಹಟ್ಟಿ, ದಾಸರಹಟ್ಟಿ ಗ್ರಾಮಗಳಲ್ಲಿ ಜುಂಜಪ್ಪ ಸ್ವಾಮಿ ದೇವರ ಜಾತ್ರಾ ಮಹೋತ್ಸವ ಮಂಗಳವಾರ ಜರುಗಿತು.
ಜಾತ್ರೆ ಪ್ರಯುಕ್ತ ಜುಂಜಪ್ಪ ಸ್ವಾಮಿ, ಈರಣ್ಣಜ್ಜ ಸ್ವಾಮಿ ಉತ್ಸವ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ನಡೆಸಲಾಯಿತು.
ಜುಂಜಪ್ಪ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬಂದು ದುಗ್ಗಳ ಸೇವೆ ಸಲ್ಲಿಸಿದರೆ, ಮನೆ ಮಂದಿಗೆ ಹಾವು- ಹುಪ್ಪಟೆಗಳು ಕಾಟ ಕೊಡುವುದಿಲ್ಲ. ಚರ್ಮ ರೋಗ ಬರುವುದಿಲ್ಲ. ಕಿವಿ ನೋವು ಕಾಣಿಸಿಕೊಳ್ಳುವುದಿಲ್ಲ. ಜಾನುವಾರುಗಳಿಗೆ ರೋಗ ತಗಲುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಹೆಚ್ಚಿನ ಭಕ್ತರು ಜಾತ್ರೆಗೆ ಬರುತ್ತಾರೆ ಎಂದು ದೇವಾಲಯ ಸಮಿತಿಯ ಹುಚ್ಚೇನಹಟ್ಟಿ ಶಿವಣ್ಣ ತಿಳಿಸಿದರು.
ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ದೇವರ ದರ್ಶನ ಪಡೆದು, ಹೂವು ಹಣ್ಣು ಸಮರ್ಪಿಸಿದರು. ದುಗ್ಗಲ ಸೇವೆ ಸಲ್ಲಿಸಿದರು. ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಗುಡ್ಡೆ ಪ್ರವೇಶ ನಡೆಯಿತು. ಬುಧವಾರ (ನ. 5) ಹುಚ್ಚೇನ ಹಟ್ಟಿಯಲ್ಲಿ ದೊಡ್ಡ ಎಡೆ ಸೇವೆ ಮತ್ತು ಉತ್ಸವದ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.
Leave a comment