ಚಿಕ್ಕಮಗಳೂರು: ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಪ್ರಚೋಧನಾಕಾರಿ ಭಾಷಣದ ಮೂಲಕ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಆರೋಪಿಸಿದರು.
ಅವರು ಇಂದು ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಕ್ಷೇತ್ರದ ಸೀತಾಳಯ್ಯನಗಿರಿ ರಸ್ತೆ, ಅತ್ತಿಗುಂಡಿ ರಸ್ತೆ, ಕೈಮರಕ್ಕೆ ಸಂಪರ್ಕ ಕಲ್ಪಿಸುವ ೩.೫೦ ಕೋಟಿ ರೂ. ವೆಚ್ಚದ ಈ ಮೂರು ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪರಿವೀಕ್ಷಣೆ ನಡೆಸಿ ಉದ್ಘಾಟಿಸಿ ಮಾತನಾಡಿ ಚೀನಾ ಮಾದರಿಯಲ್ಲಿ ಕೇಂದ್ರಸರ್ಕಾರ ಆರು ತಿಂಗಳಿಗಾಗುವಷ್ಟು ಅಡುಗೆ ಅನಿಲ, ವಾಣಿಜ್ಯ ಬಳಕೆ ಟೆಂಡರ್, ಸಿಎನ್ಜಿ ಗ್ಯಾಸ್ ದಾಸ್ತಾನು ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಮುಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ, ಹೋಟೆಲ್ಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಸಿಗುತ್ತಿಲ್ಲ. ಆಟೋಗಳಿಗೆ ಸಿಎನ್ಜಿ ಗ್ಯಾಸ್ ದೊರೆಯುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಭಾವನೆಗಳನ್ನು ಕೆರಳಿಸಿ ಬಿಜೆಪಿ ರಾಜಕಾರಣ ಮಾಡುತ್ತಿದ್ದು, ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದರೆ ನಂದಿಸಲು ಅವರಿಂದಲೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರಪಂಚದಲ್ಲೇ ಮಾದರಿ ಶಾಂತಿಯನ್ನು ಸಾರುತ್ತಿರುವ ಭಾರತದ ಮೌಲ್ಯವನ್ನು ಎತ್ತಿಹಿಡಿಯಬೇಕೆಂದರು.
ಅಭಿವೃದ್ಧಿಯಲ್ಲೂ ಹಿಂದೆ ಬೀಳದ ರಾಜ್ಯಸರ್ಕಾರ ಸರ್ವ ಜನಾಂಗದ ಬಡವರ ಆಶಾಕಿರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಬದುಕು ಕಟ್ಟಿಕೊಡಲು ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನಪರ ಆಡಳಿತ ನೀಡುತ್ತಿದೆ ಎಂದು ಶ್ಲಾಘಿಸಿದರು. ಹಿಂದೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಕ್ಷೇತ್ರದ ಗ್ರಾಮಾಂತರ ಮತ್ತು ನಗರದಲ್ಲಿಯ ಕಾಮಗಾರಿಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಉದ್ಘಾಟನೆ ನೆರವೇರಿಸಿ ಸಾರ್ವಜನಿಕರಿಗೆ ಸಮರ್ಪಣೆ ಮಾಡುತ್ತಿದ್ದೇವೆ ಎಂದರು.
ಅಭಿವೃದ್ಧಿಗೆ ಹೆಚ್ಚು ಒತ್ತುನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯಸರ್ಕಾರವನ್ನು ಅಧಿಕಾರಕ್ಕೆ ತಂದ ಮತದಾರ ಬಂಧುಗಳಿಗೆ ಸಲ್ಲುತ್ತದೆ. ನಮ್ಮ ಮೇಲೆ ಭರವಸೆ ಇಟ್ಟು ಮತನೀಡಿ ಜಯಗಳಿಸಲು ಸಹಕರಿಸಿದ ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಮಸಮಾಜ ನಿರ್ಮಾಣ ಮಾಡಬೇಕೆಂಬ ಹನ್ನೆರಡನೇ ಶತಮಾನದ ವಿಶ್ವಗುರು ಬಸವಣ್ಣನವರ ಆಶಯವನ್ನು ಹತ್ತೊಂಬತ್ತನೇ ಶತಮಾನದ ಡಾ. ಬಿ.ಆರ್ ಅಂಬೇಡ್ಕರ್ರವರು ಸಂವಿಧಾನದಲ್ಲಿ ಅಳವಡಿಸಿ ಕೆಳವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರಬೇಕೆಂಬ ಅವಕಾಶವನ್ನು ನೀಡಿದ್ದಾರೆ. ಜೊತೆಗೆ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿ ಸಮಾನತೆಯನ್ನು ಸಾರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರವೀಣ್ ಬೆಟಗೆರೆ, ಹಿರೇಮಗಳೂರು ರಾಮಚಂದ್ರ, ಜಗಧೀಶ್, ಗ್ರಾಮಸ್ತರುಗಳಾದ ಶಾಂತಕುಮಾರ್, ಧರ್ಮಣ್ಣ, ಮುನ್ನ, ಶಂಕರ್, ಸಾವಿತ್ರಿ, ಎಇಇ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.
Inauguration of various roads costing Rs. 3.50 crore
Leave a comment