ಚಿಕ್ಕಮಗಳೂರು: ಸವಿತಾ ಸಮಾಜಕ್ಕೆ ನನ್ನಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಸವಿತಾ ಸಮಾಜದ ಬಗ್ಗೆ ನಿಷೇಧಿತ ಪದ ಬಳಸಲಾಗಿದೆ ಎನ್ನುವ ಆರೋಪಗಳು ಬಂದಿದ್ದ ಹಿನ್ನೆಲೆಯಲ್ಲಿ ನಗರದ ನೆಹರೂ ರಸ್ತೆ ಕ್ರಾಸ್ನಲ್ಲಿರುವ ಸವಿತಾ ಸಮಾಜದ ಸಭಾಂಗಣದಲ್ಲಿ ಸಮಾಜದ ಮುಖಂಡರುಗಳನ್ನು ಖುದ್ದಾಗಿ ಭೇಟಿ ಮಾಡಿ ಅವರು ಮಾತನಾಡಿ ಸವಿತ ಸಮಾಜದ ನೋವು, ಸಂಕಟ, ಕೋಪ, ಹತಾಷೆಯನ್ನು ಅರ್ಥ ಮಾಡಿಕೊಂಡು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನಿಂದ ಯಾರಿಗೂ ನೋವಾಗಬಾರದು. ನನ್ನಿಂದ ಸಮಾಜಕ್ಕೆ ನೋವಾಗಿದ್ದರೆ ನನಗೆ ಹಾಗೂ ನನ್ನ ಹೆತ್ತ ತಂದೆ, ತಾಯಿಗೆ ಆದ ನೋವು. ಹಾಗೆ ಆಗಿದ್ದರೆ ಮೊದಲು ನಾನು ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದರು.
ಅನುಭವಿಸಿದವರಿಗೆ ನೋವಿನ ಸಂಕಟ ಗೊತ್ತಾಗುತ್ತದೆ. ಅಲ್ಲದೆ ಸವಿತಾ ಸಮಾಜ ನನ್ನ ಮೇಲೆ ಅಭಿಮಾನವನ್ನೂ ಇಟ್ಟಿದೆ. ಕಳೆದ ಶನಿವಾರ ನಾನು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದೆ. ಅಲ್ಲಿ ಸ್ಥಳೀಯ ಟಿವಿ ಚಾನೆಲ್ನವರು ಇದ್ದರು. ಯಾವುದರಲ್ಲೂ ಸುದ್ದಿ ಆಗಲಿಲ್ಲ. ನಾಲ್ಕು ದಿನಗಳ ನಂತರ ಒಬ್ಬರು ರಾಜಕೀಯವಾಗಿ ನನ್ನ ಜೊತೆ ಇದ್ದು, ಈಗ ಇಲ್ಲದಿರುವ ಒಬ್ಬರ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಕಟವಾಯಿತು. ಅಲ್ಲಿಂದಲೇ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಸವಿತಾ ಸಮಾಜಕ್ಕೆ ಅಪಮಾನ ಮಾಡಿದ ಸಿ.ಟಿ.ರವಿ ಎಂದು ಟ್ರೋಲ್ಗಳು ಆರಂಭವಾಯಿತು ಎಂದರು.
ನನಗೆ ಎದೆ ಬಗೆದು ತೋರಿಸುವಷ್ಟು ಸಾಮರ್ಥ್ಯವಿಲ್ಲ. ನನ್ನ ಭಾವನೆಗಳನ್ನ ಮಾತಿನಲ್ಲಿ ಹೇಳಬಹುದು. ಆ ಸುದ್ದಿ ಗೊತ್ತಾಗುತ್ತಿದ್ದಂತೆ ನಾವು ಸವಿತಾ ಸಮಾಜದವರು ನಮ್ಮ ಆತ್ಮ ಬಂಧುಗಳು, ಅವರಿಗೆ ಅಪಮಾನ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಅಂದೇ ಸ್ಪಷ್ಟನೆ ನೀಡಿದ್ದೇನೆ ಎಂದರು.
ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ನನ್ನನ್ನು ಸವಿತಾ ಸಮಾಜದವರು ನೋಡುತ್ತಿದ್ದಾರೆ. ಎಂದಿಗೂ ನಾನೂ ಸಮಾಜಕ್ಕೆ ಅಪಮಾನವಾಗುವ ಪದವನ್ನು ಬಳಸಿಲ್ಲ. ಈ ಕಾರಣಕ್ಕೆ ನನ್ನ ಮೇಲೆ ಬಂದಿರುವ ಆರೋಪವನ್ನು ನಂಬಬೇಕೋ, ಬೇಡವೋ ಎನ್ನುವ ಸಂಕಟ ನಿಮ್ಮನ್ನು ಕಾಡುತ್ತಿದೆ. ಬೇರೆ ಯಾರನ್ನೋ ಆದರೆ ಇವರಿಗೆ ಯಾವಾಗ ಬುದ್ಧಿ ಬರುತ್ತದೋ ಎಂದುಕೊಳ್ಳುತ್ತಿದ್ದಿರಿ. ಆದರೆ ನಮ್ಮ ರವಿಯೇ ಹೀಗೆ ಮಾತನಾಡಿದರಲ್ಲ ಎನ್ನುವ ಸಂಕಟ ನಿಮಗಾಗಿದೆ ಎನ್ನುವದನ್ನು ಅರ್ಥಮಾಡಿಕೊಂಡಿದ್ದೇನೆ. ಅದಕ್ಕಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೋವಾಗಿದ್ದರೆ ಅದಕ್ಕಾಗಿ ಕ್ಷಮಾಪಣೆ ಕೋರುತ್ತೇನೆ ಎಂದರು.
ಈ ವಿಚಾರದಲ್ಲಿ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಹೌಸಿಂಗ್ ಬೋರ್ಡ್ನ ಒಂದು ಹೋಂಸ್ಟೇನಲ್ಲಿ ಸೇರಿಸಿ ಹೀಗೆ ಮಾಡಬೇಕು, ಹಾಗೇ ಮಾಡಬೇಕೆಂದು ಷಡ್ಯಂತ್ರ ಮಾಡಿದರು. ಏನು ಖರ್ಚು ಬರುತ್ತೆ ಎಲ್ಲವನ್ನೂ ನಾವೇ ನೋಡಿಕೊಳ್ಳುತ್ತೇವೆ ಎಂದು ಒತ್ತಡ ಹೇರಿದರು. ಇಷ್ಟಾದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪ್ರೀತಿಯನ್ನೇ ತೋರಿಸಿ, ಪ್ರೀತಿಯಿಂದಲೇ ನಿಮ್ಮ ನೋವನ್ನು ಹಂಚಿಕೊಂಡಿದ್ದೀರಿ. ಯಾವುದೋ ಒಂದು ಕಾಲದಲ್ಲಿ ನಿಮ್ಮ ಮಗನೋ, ಅಣ್ಣ, ತಮ್ಮನೋ ಆಗಿದ್ದೆ ಎನ್ನಿಸುತ್ತದೆ. ಹಾಗಾಗಿ ಯಾವ ಸಂದರ್ಭದಲ್ಲೂ ನನ್ನನ್ನು ಬಿಟ್ಟು ಕೊಡದೆ ಪ್ರೀತಿ ತೋರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಆರ್ಯ ನಯನಜ ಜಿಲ್ಲಾ sಸವಿತಾ ಸಮಾಜ ಅಧ್ಯಕ್ಷ ಎಸ್.ಎನ್.ಮಹಾಲಿಂಗಪ್ಪ, ಕಾರ್ಯದರ್ಶಿ ಎನ್.ಶ್ರೀಧರ್, ನಗರ ಆರ್ಯ ನಯನಜ ಜಿಲ್ಲಾ sಸವಿತಾ ಸಮಾಜ ಸಂಘದ ಅಧ್ಯಕ್ಷ ಸಿ.ಎಂ.ಯೋಗೀಶ್, ಯುವ ಘಟಕದ ಅಧ್ಯಕ್ಷ ಧನ್ರಾಜ್, ಮಹಿಳಾ ಮುಖಂಡರಾದ ಸುನಂದ, ಸವಿತಾ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ವೆಂಕಟೇಶ್, ಯಶ್ವಿನ್ ಇತರರು ಇದ್ದರು.
I apologize if Savita has hurt the society.
Leave a comment