ಚಿಕ್ಕಮಗಳೂರು: ಹಿರಿಯ ಸಚಿವ ಮತ್ತೊಬ್ಬ ಹಿರಿಯ ಸಚಿವನ ರಾಜಕೀಯ ಜೀವನ ಮುಗಿಸುವುದಕ್ಕೆ ಹನಿಟ್ರ್ಯಾಪ್ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ರಾಜ್ಯ ರಾಜಕಾರಣದಲ್ಲಿ ೪೮ ಜನರ ಹನಿಟ್ರ್ಯಾಪ್ ಸಿಡಿ ವಿಚಾರ ಕುರಿತು ಗಮನ ಸೆಳೆದಾಗ, ಆಡಳಿತ ಪಕ್ಷದ ಸಚಿವ ಸಂಪುಟದ ಸಚಿವರೊಬ್ಬರು ಹನಿಟ್ರ್ಯಾಪ್ ಬಗ್ಗೆ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ, ಇದು ಸಣ್ಣ ವಿಷಯವೇ, ತಳ್ಳಿ ಹಾಕುವಂತಹದ್ದೆ, ಜಡ್ಜ್, ಶಾಸಕರು, ಮುಖಂಡರು, ಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿಸಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.
ಶತೃಗಳನ್ನು ಮಣಿಸುವುದಕ್ಕೆ ರಾಜ-ಮಹಾರಾಜರು ಇದನ್ನೆ ಬಳಸಿಕೊಳ್ಳುತ್ತಿದ್ದರು.ಶತೃ ದೇಶಗಳು ಬೇಹುಗಾರಿಕೆಗೆ ಸುಂದರ ಹೆಣ್ಣು ಮಕ್ಕಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಋಷಿ-ಮುನಿಗಳ ತಪಸ್ಸು ಭಂಗ ಮಾಡೋದಕ್ಕೆ ದೇವ ಕನ್ಯೆಯರನ್ನೇ ಬಳಸಿಕೊಂಡಿದ್ದು ಪುರಾಣಗಳಲ್ಲಿದೆ. ಎಂದು ತಿಳಿಸಿದ ಅವರು, ಹನಿಟ್ರ್ಯಾಪ್ ವಿಷಯದಲ್ಲಿ ಯಾರೂ ದೂರು ನೀಡಿಲ್ಲ, ಆದರೆ, ಸದನ, ವಿಧಾನಸಭೆಯಲ್ಲಿ ಆರೋಪ ಮಾಡೋದು ಸಾಮಾನ್ಯ ವಿಷಯವೇ ಎಂದು ಪ್ರಶ್ನಿಸಿದರು.
ಆ ಆರೋಪವನ್ನೇ ದೂರೆಂದು ಪರಿಗಣಿಸಿ ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಆಗ್ರಹಿಸಿದ್ದೇವೆ.ನಮ್ಮ ಹೋರಾಟ ಹತ್ತಿಕ್ಕಲು ನಮ್ಮ ಪಕ್ಷದ ೧೮ ಜನ ಸದಸ್ಯರನ್ನು ಅಮಾನತು ಮಾಡಿದ್ದಾರೆ.ವಿಧಾನಸಭೆ ಅಧ್ಯಕ್ಷರು ತಮ್ಮ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದರು.
Honeytrap to end senior minister’s political career
Leave a comment