ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಸಮೀಪ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ನೂರಾರು ಎಕರೆ ಪ್ರದೇಶಕ್ಕೆ ಆವರಿಸಿದೆ.
ರಸ್ತೆ ಬದಿಯಲ್ಲಿ ಹೊತ್ತಿಕೊಂಡ ಕಿಡಿ ಇಡೀ ಗುಡ್ಡಕ್ಕೆ ಹರಡಿದೆ. ಅಗ್ನಿಶಾಮಕ ಸಿಬ್ಬಂದಿ ನಂದಿಸಲು ಪ್ರಯತ್ನಿಸಿದರು. ರಸ್ತೆ ಬದಿ ಇದ್ದ ಬೆಂಕಿಯನ್ನಷ್ಟೇ ನಂದಿಸಲಾಗಿದ್ದು, ಗುಡ್ಡಕ್ಕೆ ಏರಿದ್ದನ್ನು ನಂದಿಸಲು ಪರದಾಡಿದರು. ಬೆಂಕಿ ಹೊತ್ತಿಕೊಂಡು ಎರಡು ಗಂಟೆ ಕಳೆದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ಈ ಭಾಗದಲ್ಲಿ ಆನೆ, ಕಡವೆ, ಮಂಗ, ನವಿಲು, ಕಾಡು ಹಂದಿ, ಕಾಡುಕೋಣಗಳು, ಚಿರತೆ ಹೆಚ್ಚಿನ ಸಂಖ್ಯೆಯಲ್ಲಿವೆ. ವಿಶೇಷ ಕೀಟ ಪ್ರಬೇಧ, ಪಕ್ಷಿಗಳು, ಸಸ್ಯ ಸಂಪತ್ತು ಈ ಭಾಗದಲ್ಲಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಪರದಾಡಿದರು.
ನಾಲ್ಕು ದಿನಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಹರಸಾಹಸ ನಡೆಸಿ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಿದ್ದರು.
Fire breaks out in forest near Annappa Swamy temple in Charmadi Ghat
Leave a comment