ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಅತಿ ಶೀಘ್ರ ವೈಜ್ಞಾನಿಕ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರಿನಿಂದಲು ಅತೀ ಹೆಚ್ಚು ಮಳೆಯಿಂದಾಗಿ ಅತಿವೃಷ್ಟಿಯಾಗಿದ್ದು, ರೈತರ ಹಾಗೂ ಜನಸಾಮಾನ್ಯರ ಬದುಕು ಸಂಕಷ್ಟಕ್ಕಿಡಾಗಿದ್ದು, ಪ್ರಾಣ ಹಾನಿ, ಮನೆಗಳ ಕುಸಿತ, ಜನ-ಜಾನುವಾರುಗಳು ನದಿಯಲ್ಲಿ ತೇಲಿಹೋಗಿ ರೈತರ ಜಮೀನಿನಲ್ಲಿ ಮಳೆನೀರು ನುಗ್ಗಿ ಬೆಳೆ ಸರ್ವನಾಶವಾಗಿದೆ ಎಂದು ಹೇಳಿದರು.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳ, ಆಲೂಗಡ್ಡೆ, ಬೀನ್ಸ್, ಟೊಮ್ಯಾಟೋ, ಮೆಣಸಿನ ಗಿಡ, ಬಟಾಣಿ ಮುಂತಾದ ಬೆಳೆಗಳು ನೆಲ ಕಚ್ಚಿದ್ದು, ಇದರಿಂದಾಗಿ ರೈತರು ಸಾಲಬಾಧೆಯಿಂದ ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಬೆಳೆ ಸಮೀಕ್ಷೆಯನ್ನು ಮಾಡಿ ಸಮಗ್ರ ವರದಿ ತಯಾರಿಸಿ ಸಮರೋಪಾದಿಯಲ್ಲಿ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಕಸಬಾ, ಅಂಬಳೆ, ಲಕ್ಯಾ ಹೋಬಳಿಯಲ್ಲಿ ಒಂದೆಡೆ ಅನಾವೃಷ್ಟಿಯಾಗಿದ್ದರೆ, ಇನ್ನೊಂದೆಡೆ ಅತಿವೃಷ್ಟಿಯಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ತರೀಕೆರೆ, ಕಡೂರು ತಾಲ್ಲೂಕುಗಳಲ್ಲಿ ರೈತರು ಬೆಳೆದ ಈರುಳ್ಳಿ ಬೆಳೆ ಭೂಮಿಯಲ್ಲೇ ಕರಗಿದೆ. ಮಲೆನಾಡಿನಲ್ಲಿ ಕಾಫಿ, ಅಡಿಕೆ, ಕಾಳುಮೆಣಸು ಮುಂತಾದ ಬೆಳೆಗಳು ಶೇ.೫೦ ರಷ್ಟು ಉದುರಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಬೇಸಾಯ, ಬೀಜ, ರಸಗೊಬ್ಬರ, ಔಷಧಿ, ಕಳೆನಾಶಕ ಸೇರಿದಂತೆ ಪ್ರತಿ ಎಕರೆಗೆ ೫೦ ಸಾವಿರದಿಂದ ೧ ಲಕ್ಷ ರೂಗಳವರೆಗೆ ರೈತರು ವಿವಿಧ ಬ್ಯಾಂಕ್ಗಳಲ್ಲಿ ಬೆಳೆಸಾಲ ಪಡೆದು ಬೆಳೆ ಮಾಡಿದ್ದು, ಈ ನಷ್ಟದಿಂದಾಗಿ ಸಹಕಾರ ಬ್ಯಾಂಕ್ಗಳಲ್ಲಿ ಮಾಡಿರುವ ಸಾಲ ತೀರಿಸಲು ದಾರಿ ಕಾಣದೆ ಪರಿತಪಿಸುತ್ತಿದ್ದಾರೆಂದು ಹೇಳಿದರು.
ಕಾಡಂಚಿನ ಗ್ರಾಮಗಳು ಹಾಗೂ ಮಲೆನಾಡು ಪ್ರದೇಶದಲ್ಲಿ ಅನೇಕರು ಕಾಡಾನೆ ಮತ್ತು ವನ್ಯಜೀವಿಗಳ ಉಪಟಳದಿಂದಾಗಿ ತೊಂದರೆ ಅನುಭವಿಸುವಂತಾಗಿದೆ. ಜೀವ ಹಾನಿಯೂ ಆಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಧಾವಿಸಿ ಸಾಂತ್ವಾನ ಹೇಳಿ ಧೈರ್ಯ ತುಂಬಬೇಕೆಂದು ಆಗ್ರಹಿಸಿದರು.
ಕಂದಾಯ ಇಲಾಖೆ, ತೋಟಗಾರಿಕೆ, ಕೃಷಿ ಇಲಾಖೆಗಳು ಕೂಡಲೇ ಜಂಟಿ ಸರ್ವೆ ನಡೆಸಿ ಜಿಲ್ಲೆಯಲ್ಲಿ ಆಗಿರುವ ಬೆಳೆಹಾನಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು, ಅತೀ ಶೀಘ್ರದಲ್ಲಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು, ಮಳೆಯಿಂದ ಹಾನಿಗೊಳಗಾಗಿರುವ ಮನೆಗಳನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ ಅವರು, ಪ್ರತಿ ಎಕರೆಗೆ ಬೆಳೆ ಕಳೆದುಕೊಂಡ ರೈತರಿಗೆ ಕನಿಷ್ಠ ೩೦ ಸಾವಿರ ರೂ ಪರಿಹಾರ ನೀಡಬೇಕು, ಪ್ರವಾಹದಿಂದ ಹಾನಿಯಾಗಿರುವ ಜಮೀನನ್ನು ಸರಿಪಡಿಸಲು ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.
ಕಾಡುಪ್ರಾಣಿಗಳ ದಾಳಿಯಿಂದ ಆಗುತ್ತಿರುವ ಬೆಳೆಹಾನಿ, ಪ್ರಾಣಹಾನಿ ತಡೆಗಟ್ಟಲು ಶಾಶ್ವತವಾದ ಪರಿಹಾರ ಮಾರ್ಗ ಕಂಡುಕೊಳ್ಳಬೇಕು. ಎಲ್ಲಾ ಬೆಳೆಗಾರರ ಸಾಲ ಮನ್ನಾ ಮಾಡಿ, ಮುಂದೆ ಬೆಳೆ ಬೆಳೆಯಲು ಹೊಸದಾಗಿ ಸಾಲಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಮಾಜಿ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಅರಣ್ಯ ಅಧಿಕಾರಿಗಳಿಂದ ರೈತರ ಮಾನಹಾನಿ ಮಾಡುವ ಕೃತ್ಯವನ್ನು ಖಂಡಿಸಿದ ಅವರು, ರೈತರಿಗೆ ಕನಿಷ್ಠ ವೈಜ್ಞಾನಿಕ ಪರಿಹಾರ ನೀಡಿ ರೈತರ ರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖಂಡರಾದ ಎಂ.ಸಿ. ಬಸವರಾಜ್, ಎಂ.ಬಿ ಚಂದ್ರಶೇಖರ್, ದೇವರಾಜು, ಕುಮಾರಸ್ವಾಮಿ, ಯುವರಾಜ್, ಕೃಷ್ಣೇಗೌಡ, ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.
Farmers’ association urges scientific solution by conducting survey of excessive rainfall damage
Leave a comment