ಚಿಕ್ಕಮಗಳೂರು: ಕೃಷಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿಗೆ ರೈತ ಸಂಘದ ಮುಖಂಡರು ಮನವಿ ನೀಡಿದರು.
ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಗ್ರಾಮದಲ್ಲಿ ಗೋಮಾಳ ಜಾಗವನ್ನು ಮೀಸಲಿರಿಸಬೇಕು, ಮಾರುಕಟ್ಟೆ ದರದ ಆಧಾರದಲ್ಲಿ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿಪಡಿಸಬೇಕು.
ಬರಗಾಲ ಸಂದರ್ಭದಲ್ಲಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಬೆಳೆಯ ನಷ್ಟಗಳ ಪರಿಹಾರ ಘೋಷಣೆಗೆ ಶಿಫಾರಸ್ಸು ಮಾಡಬೇಕು . ಅರಣ್ಯ ಕೃಷಿ ಮತ್ತು ಕಂದಾಯ ಮಂತ್ರಿಗಳು ಜಂಟಿಯಾಗಿ ಚರ್ಚಿಸಿ ಕಾಡುಪ್ರಾಣಿಗಳ ಸಂಘರ್ಷ ತಡೆಗೆ ಶಾಶ್ವತ ಕಾರ್ಯಕ್ರಮ ರೂಪಿಸಬೇಕು .
ಕೃಷಿ ಇಲಾಖೆಯಿಂದ ಕೊಡ ಮಾಡುವ ಸವಲತ್ತುಗಳು, ಯೂರಿಯಾ ರಸಗೊಬ್ಬರದ ಸಮರ್ಪಕ ಪೂರೈಕೆ,ಮಲೆನಾಡ ಭಾಗದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸಮೀಕ್ಷೆ ನಡೆಸಿ ಬಡ ಭೂರಹಿತ ಕೃಷಿಕರಿಗೆ ಜಮೀನು ಸೇರಿದಂತೆ ವಾಸದ ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು.
ಕಾಫಿ ಬೆಳೆ ಪ್ರದೇಶ ವಿಸ್ತಾರವಾಗುತ್ತಿದ್ದು ಹೊಸದಾಗಿ ಕಾಫಿ ಬೆಳೆ ನಾಟಿ ಮಾಡಿದ ರೈತರಿಗೆ ಕಾಫಿ ಮಂಡಳಿ ಹಾಗು ತೋಟಗಾರಿಕೆ ಇಲಾಖೆಯೂ ನಿರಾಕರಿಸುತ್ತಿದ್ದು ಎರಡೂ ಇಲಾಖೆಯ ರೈತರು ತೊಂದರೆ ಅನುಭವಿಸುತ್ತಿದ್ದು ತಕ್ಷಣ ಕ್ರಮವಹಿಸಿ ಹೊಸ ಬೆಳೆಗಾರರಿಗೆ ಸಹಾಯಧನ ಕೊಡಿಸುವ ಬಗ್ಗೆ ಕ್ರಮಕೈಗೊಳ್ಳಬೇಕಾಗಿ ಒತ್ತಾಯಿಸಿದ್ದಾರೆ.
ರೈತರ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಅನೇಕ ಸಮಸ್ಯೆಗಳಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಸುಧಾರಣೆ ತಂದು ರೈತರಿಗೆ ಮೋಸವಾಗದಂತೆ ಎಪಿಎಂಸಿ ಗಳು ರೈತ ಸ್ನೇಹ ಆಗುವಂತೆ ಕ್ರಮಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ
ಫಸಲ್ ಭೀಮಾ ಯೋಜನೆ ಅಡಿ ವಿಮೆ ಪಡೆಯಲು ಅದರಲ್ಲಿ ಏಳು ವರ್ಷಗಳ ಬೆಳೆ ಸರಾಸರಿ ಲೆಕ್ಕ ಹಾಕಬೇಕು ಹಾಗೂ ಕ್ರಾಪ್ ಕಟಿಂಗ್ ಎಕ್ಸ್ಪರಿಮೆಂಟ್ ಮಾಡಬೇಕು ಎಂಬ ನಿಯಮ ಅವೈಜ್ಞಾನಿಕವಾಗಿದ್ದು ಬೆಳೆ ವಿಮೆ ನಿಯಮಾವಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಾಗಿ ಕೋರಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಡಿ ಮಹೇಶ್ ನೇತೃತ್ವದಲ್ಲಿ ಮನವಿ ನೀಡಿದ್ದು, ಮಾಜಿಅಧ್ಯಕ್ಷ ಗುರುಶಾಂತಪ್ಪ ಯುವ ರೖತಸಂಘದ ಜಿಲ್ಲಾಧ್ಯಕ್ಷ ಯುವರಾಜ್,ಎಂಸಿ ಬಸವರಾಜ,ಉಮೇಶ್,ಕುಮಾರಸ್ವಾಮಿ,ಲೋಕೇಶ ಧನಂಜಯರಾಜು, ವಿಜಯಕುಮಾರ, ಶಿವಕುಮಾರ ಹಾಜರಿದ್ದರು.
Farmers’ association appeals to Agriculture Minister demanding fulfillment of various demands
Leave a comment