ಚಿಕ್ಕಮಗಳೂರು: ಕೇವಲ ೩ ಸಾವಿರ ರೂ. ಸಾಲ ಮರಳಿಸದ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬರನ್ನು ಕತ್ತಿಯಿಂದ ಕಡಿದು ತೀವ್ರವಾಗಿ ಗಾಯಗೊಳಿಸಿದ್ದ ಆಪಾದಿತನಿಗೆ ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರು ವರ್ಷಗಳ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಹೋಬಳಿ ಅಡ್ಡಮಕ್ಕಿಯ ಕಾಫಿ ತೋಟದ ಕೂಲಿ ಕಾರ್ಮಿಕ ಅಸ್ಸಾಂ ಮೂಲದ ಕೋರ್ನೋ ಬಹದ್ದೂರು ರೈ ಎಂಬಾತನೇ ಶಿಕ್ಷೆಗೆ ಒಳಗಾದವ. ಈತ ರಶೀದುಲ್ಲ ಎಂಬಾತನೊಂದಿಗೆ ವಾಸವಾಗಿದ್ದು, ರಶೀದುಲ್ಲ ಈತನಿಗೆ ೩ ಸಾವಿರ ರೂ.ಗಳ ಸಾಲ ಬಾಕಿ ಉಳಿಸಿಕೊಂಡಿದ್ದ ಎನ್ನಲಾಗಿದೆ. ೨೦೨೩ರ ಜೂನ್ ೨೦ ರಂದು ಸಂಜೆ ಈ ವಿಚಾರದ ಪ್ರಶ್ನಿಸಿದ ಬಹದ್ದೂರು ರೈ ಕತ್ತಿಯಿಂದ ರಶೀದುಲ್ಲನ ತಲೆಯ ಭಾಗಕ್ಕೆ ಕಡಿಯಲು ಯತ್ನಿಸಿದ್ದು, ಇದನ್ನು ತಡೆಯಲು ಯತ್ನಿಸಿದಾಗ ರಶೀದುಲ್ಲನ ಕೈ ತುಂಡಾಗಿತ್ತು ಎನ್ನಲಾಗಿದೆ.
ಈ ಬಗ್ಗೆ ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ವಿರುದ್ಧ ಐಪಿಸಿ ಕಲಂ ೫೦೬, ೩೦೭, ೩೨೬, ೩೨೪ರ ಅನ್ವಯ ಪ್ರಕರಣ ದಾಖಲಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಸಿ.ಭಾನುಮತಿ ಅವರು ಸಾಕ್ಷಿದಾರರ ವಿಚಾರಣೆ ನಡೆಸಿದ ಸಂದರ್ಭ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಪಾದಿತನಿಗೆ ಐಪಿಸಿ ೩೦೭ರ ಅನ್ವಯ ೬ ವರ್ಷಗಳ ಕಠಿಣ ಸಜೆ, ೧೦ ಸಾವಿರ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ೬ ತಿಂಗಳ ಸಾದಾ ಸಜೆ ಅನುಭವಿಸಲು ತೀರ್ಪಿನಲ್ಲಿ ತಿಳಿಸಿದ್ದಾರೆ.
ಕಲಂ ೩೨೬ ಐಪಿಸಿ ಅಡಿಯ ಅಪರಾಧಕ್ಕಾಗಿ ಆತನಿಗೆ ೫ ವರ್ಷ ಕಠಿಣ ಸಜೆ, ೫ ಸಾವಿರ ರೂ. ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ ಮತ್ತೆ ೬ ತಿಂಗಳ ಸಾದಾ ಸಜೆ, ಕಲಂ ೩೨೪ ರಡಿ ಅಪರಾಧಕ್ಕಾಗಿ ೨ ವರ್ಷ ಕಠಿಣ ಸಜೆ ಹಾಗೂ ೩ ಸಾವಿರ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳ ಸಾದಾ ಸಜೆ, ಕಲಂ ೫೦೬ರ ಐಪಿಸಿ ಅಡಿಯ ಅಪರಾಧಕ್ಕಾಗಿ ೧ ವರ್ಷ ಕಠಿಣ ಸಜೆ ಮತ್ತು ೨ ಸಾವಿರ ರೂ. ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ ೧೫ ದಿನಗಳ ಸಾದಾ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಆಪಾದಿತ ಈ ಎಲ್ಲ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಲಿದ್ದಾನೆ.
ಪ್ರಕರಣದಲ್ಲಿ ತನಿಖಾಧಿಕಾರಿಗಳಾದ ಆಲ್ದೂರು ಠಾಣೆಯ ಪಿಎಸ್ಐಗಳಾಗಿದ್ದ ಸಜಿತ್ಕುಮಾರ್ ಹಾಗೂ ಅಕ್ಷಿತಾ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆಲ್ದೂರು ಠಾಣೆಯ ಎಎಸ್ಐ ಬಸವರಾಜು ಅವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ವಿಚಾರಣೆಗೆ ಸಮರ್ಪಕವಾಗಿ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹೆಚ್.ಎಸ್.ಲೋಹಿತಾಶ್ವ ಆಚಾರ್ ವಾದ ಮಂಡಿಸಿದ್ದರು.
Criminal who stabbed with sword gets 6 years rigorous imprisonment
Leave a comment