ಚಿಕ್ಕಮಗಳೂರು: ಕೇಂದ್ರ ಸರಕಾರ ಯುದ್ದದ ನೆಪದಲ್ಲಿ ಅಡುಗೆ ಅನಿಲವನ್ನು ಅಸಮರ್ಪಕ ವಿತರಣೆ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೌದೆ ಒಲೆಯಲ್ಲಿ ಟೀ ತಯಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಆಜಾದ್ ಪಾರ್ಕಿನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸೌದೆ ಒಲೆ ಹಾಕಿ ಟೀ ಕಾಯಿಸುವ ಮೂಲಕ ಗ್ಯಾಸ್ ಅಸಮರ್ಪಕ ವಿತರಣೆಗೆ ಪ್ರತಿರೋಧ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಳೆದ ೧೨ ವರ್ಷದಿಂದ ನಿರಂತರವಾಗಿ ಕೊಟ್ಟ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಹಿಂದೆ ಬ್ಯಾಂಕ್ ಮುಂದೆ ಗ್ರಾಹಕರು ಕ್ಯೂ ನಿಲ್ಲಿಸಿದ್ದ ಸರಕಾರ ಈಗ ಗ್ಯಾಸ್ ಸಿಲಿಂಡರ್ ಪಡೆಯಲು ಕ್ಯೂ ನಿಲ್ಲಿಸಿದೆ. ಗ್ಯಾಸ್ ಇಲ್ಲದೆ ಹೊಟೇಲ್ಗಳು ಮುಚ್ಚುತ್ತಿವೆ, ಸಣ್ಣಪುಟ್ಟ ವ್ಯಾಪಾರಿಗಳು ಟೆಂಟ್ ಬಂದ್ ಮಾಡಿದ್ದಾರೆ. ದೇಶದ ರಾಜತಾಂತ್ರಿಕತೆ ಹದಗೆಟ್ಟಿದ್ದು, ವಿದೇಶಿ ಪಾಲಿಸಿಗಳನ್ನು ಟ್ರಂಪ್ ಮಾತು ಕೇಳಿ ಧಿಕ್ಕರಿಸಲಾಗಿರುವ ಪರಿಣಾಮವನ್ನು ಇಂದು ಜನಸಾಮಾನ್ಯರು ಎದುರಿಸಬೇಕಾಗಿದೆ ಎಂದರು.
ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ದೇಶದ ನಾಗರೀಕರಿಗೆ ಮೂಲಸೌಲಭ್ಯ ಒದಗಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ತಾಳಕ್ಕೆ ಮೋದಿ ಕುಣಿಯುತ್ತಿದ್ದಾರೆ. ದೇಶದ ಜನರನ್ನು ಅಧೋಗತಿಯತ್ತ ತಳ್ಳಿದ್ದಾರೆ ಎಂದು ಟೀಕಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಗ್ಯಾಸ್, ಪೆಟ್ರೋಲ್, ಡಿಸೇಲ್ ಮತ್ತಿತರೆ ಸೌಲಭ್ಯಗಳನ್ನು ನೀಡುವುದು ಕೇಂದ್ರದ ಹೊಣೆಗಾರಿಕೆ. ಆದರೆ, ಯುದ್ದದ ನೆಪದಲ್ಲಿ ಈಗ ಅಡುಗೆ ಅನಿಲವೇ ಸಿಗದಂತಾಗಿದೆ. ನಮ್ಮ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ತಾಳಿರುವ ಎನ್ಡಿಎ ಸರಕಾರವನ್ನು ಕಿತ್ತೆಸೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಸಿ.ಶಿವಾನಂದ ಸ್ವಾಮಿ, ಪ್ರವೀಣ್ ಬೆಟ್ಟಗೆರೆ, ಮಲ್ಲೇಶಸ್ವಾಮಿ, ಹಿರೇಮಗಳೂರು ರಾಮಚಂದ್ರ, ತನೋಜ್ ನಾಯ್ಡು. ಸಿಲ್ವಸ್ಟರ್, ಎಂ.ಡಿ.ರಮೇಶ್, ಪ್ರಸಾದ್ ಅಮೀನ್, ಹಿರೇಗೌಜ ಶಿವಕುಮಾರ್, ಸಂತೋಷ್ ಲಕ್ಯಾ, ಶ್ರೀಕಾಂತ್, ಪ್ರಕಾಶ್ ರೈ, ರೂಬೆನ್ ಮೊಸಸ್, ಲಾಕೇಶ್, ಪರಮೇಶ್ ರಾಜ್ ಅರಸ್, ರಾಜು, ಮಂಜುಳಾಲಕ್ಷ್ಮಣ್, ಕುಸುಮಭರತ್ ಮತ್ತಿತರರಿದ್ದರು.
Congress workers protest by making tea in a wood-burning stove
Leave a comment