ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯ ಮಕ್ಕಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ಸಿಬ್ಬಂದಿಗಳು ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಕ್ಕಳ ರಕ್ಷಣಾ ಕಾರ್ಯಕ್ರಮಗಳು ಖಾಯಂ ಸ್ವರೂಪದ್ದಾಗಿದ್ದು, ಮಿಷನ್ ವಾತ್ಸಲ್ಯ ಯೋಜನೆಯನ್ನು ಖಾಯಂಗೊಳಿಸಿ ವೇತನ ಹೆಚ್ಚಳ ಮಾಡಬೇಕು. ಪಶ್ಚಚಿಮ ಬಂಗಾಳ ಮಿಷನ್ ವಾತ್ಸಲ್ಯ ಮಾದರಿಯಲ್ಲಿ ರಜೆ ಸೌಲಭ್ಯ, ೬೦ ವರ್ಷಗಳ ಬರಗೆ ಉದ್ಯೋಗ ಭದ್ರತೆ, ಸಕಾಲದಲ್ಲಿ ವೇತನ ಪಾವತಿ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
೧೪ ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಖಾಯಮಾತಿಗೊಳಿಸಲು ಸೇವಾನಿಯಮಾವಳಿಗಳ ರಚನೆ ಮಾಡುವುದು, ನ್ಯಾಯಾಲಯದ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ, ೧೫ ದಿನಗಳ ಅನಾರೋಗ್ಯ/ ಗಳಿಕೆ ರಜೆ, ಚೈಲ್ಡ್ ಲೈನ್ ಸಿಬ್ಬಂದಿಗಳಿಗೆ ಮತ್ತು ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೊಚಕರಿಗೆ, ಡಿ. ಗ್ರೂಪ್ ನೌಕರರಿಗೆ ಕನಿಷ್ಟ ವೇತನ ಜಾರಿಗೊಳಿಸಬೇಕೆಂದು ಕೋರಿದ್ದಾರೆ.
ವೇತನದಲ್ಲಿ ಕಡಿಮೆ ಮಾಡಿದ ಜಿಎಸ್ ಟಿ ಸೇವಾ ತೆರಿಗೆಯನ್ನು ಹಿಂದಿರುಗಿಸುವುದು, ಮಹಿಳಾ ಸಿಬ್ಬಂದಿಗೆ ವೇತನ ಸಹಿತ ಹೆರಿಗೆ ರಜೆ, ಮುಟ್ಟಿನ ರಜೆ ನೀಡುವುದು, ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ೧೦ ಲಕ್ಷ ಅಪಘಾತ ಚಿಕಿತ್ಸೆ ವೆಚ್ಚ ಮತ್ತು ವಿಮೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮಂಜುನಾಥ್, ಲೋಕೇಶ್, ಚೆಲುವರಾಜು, ರೇವಣಸಿದ್ದಪ್ಪ, ರೇಣುಕ, ಅಮಿತ, ದಾಕ್ಷಾಯಿಣಿ, ಧರ್ಮಾವತಿ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಬಾಲಕ ಬಾಲಕಿಯರ ಬಾನ ಮಂದಿರದ ಸಿಬ್ಬಂದಿ, ಸಹಾಯವಾಣಿ ಸಿಬ್ಬಂದಿ ಹಾಗೂ ದತ್ತು ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.
Child protection workers appeal for child protection
Leave a comment