ಚಿಕ್ಕಮಗಳೂರು: ‘ಮಂಡ್ಯದ ಮೈಷುಗರ್ ಶಾಲೆಗೆ ₹25 ಕೋಟಿ ಠೇವಣಿ ಇಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಅವರು ಮೊದಲು ತಮ್ಮ ನಾಲಿಗೆ ಸರಿಯಾಗಿ ಇಟ್ಟುಕೊಂಡು ಬೇರೆಯವರ ಬಗ್ಗೆ ಮಾತನಾಡಲಿ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ವೇತನದ ಹಣವನ್ನು ಶಿಕ್ಷಕರಿಗೆ ಕೊಡುತ್ತಿದ್ದೇನೆ. ಇದು ಪಾಪದ ಹಣವಲ್ಲ. ನಾನೇನು ಕಮಿಷನ್ ತೆಗೆದುಕೊಂಡಿಲ್ಲ. ವರ್ಗಾವಣೆಯಿಂದ ಹೊಡೆದುಕೊಂಡ ಹಣವಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಕುಮಾರಸ್ವಾಮಿ ಅವರು ಇಡೀ ರಾಷ್ಟ್ರದಲ್ಲಿ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆಯೇ, ಎಷ್ಟು ಕಾರ್ಖಾನೆಗಳಿಂದ ಕಮಿಷನ್ ತೆಗೆದುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.
‘ಎಲ್ಲೋ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಹಿಟ್ ಆ್ಯಂಡ್ ರನ್ ಮಾಡುವುದಲ್ಲ. ಎದುರಿಗೆ ಬಂದು ಮಾತನಾಡಲು ಹೇಳಿ. ದಿನಾಂಕ ನಿಗದಿ ಮಾಡಲು ಹೇಳಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದಾರೆ, ಕೇಂದ್ರದ ಮಂತ್ರಿಯಾಗಿ ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಾಗಲಿದೆ’ ಎಂದರು.
‘ಶಾಲೆಗೆ ₹25 ಕೋಟಿ ಠೇವಣಿ ಇಡುವುದಾಗಿ ಅವರೇ ತಾನೇ ಮಾಧ್ಯಮಗಳಿಗೆ ಹೇಳಿದ್ದು. ಯಾವ ನಾಲಿಗೆಯಲ್ಲಿ ಹೇಳಿದರು, ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ ಏಕೆ ಹೇಳಬೇಕಿತ್ತು. ಈಗ ಪಾಪದ ಹಣವಲ್ಲ, ಸಂಬಳದ ಹಣದಲ್ಲಿ ಕೊಡುತ್ತೇನೆ ಎನ್ನುತ್ತಾರೆ. ನಾನು ಅವರ ಜತೆಯಲ್ಲೇ ಇದ್ದವನು, ಯಾವ ಹಣದಲ್ಲಿ ಕೊಡುತ್ತಾರೆ ಎಂಬುದು ನಗಗೆ ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.
‘ಅವರು ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲವೇ, ನನ್ನ ಬಗ್ಗೆ ಹೇಳಲು ಅವರ ಬಳಿ ಹತ್ತು ವಿಷಯಗಳಿದ್ದರೆ ನನ್ನ ಬಳಿ ಸಾವಿರ ಇವೆ. ಎಚ್.ಡಿ.ದೇವೇಗೌಡರ ಬಳಿ ನಾನೂ ಕಲಿತಿದ್ದೇನೆ. ಅವರ ಮಗ ಕುಮಾರಸ್ವಾಮಿ ಎಂಬ ಕಾರಣಕಷ್ಟೇ ಸುಮ್ಮನಿದ್ದೇನೆ’ ಎಂದರು.
‘ನವೆಂಬರ್ನಲ್ಲಿ ರಾಜಕೀಯ ಕ್ರಾಂತಿಯೂ ಇಲ್ಲ, ಏನೂ ಇಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿ ಅನೊನ್ಯವಾಗಿ ದ್ದಾರೆ. ಯಾವುದೇ ತೀರ್ಮಾನವಿದ್ದರೂ ಹೈಕಮಾಂಡ್ ತೆಗೆದುಕೊಳ್ಳುತ್ತದೆ’ ಎಂದು ಸ್ಪಷ್ಟಪಡಿಸಿದರು.
ಶಾರದಾ ಮಠಕ್ಕೆ ಭೇಟಿ : ಶೃಂಗೇರಿ ಶಾರದಾ ಪೀಠಕ್ಕೆ ಗುರುವಾರ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಪತ್ನಿ ಧನಲಕ್ಷ್ಮಿ ಅವರು ಭೇಟಿ ನೀಡಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಶಕ್ತಿ ಗಣಪತಿ, ತೋರಣ ಗಣಪತಿ ಮತ್ತು ಶಂಕರಚಾರ್ಯ ದೇವಾಲಯ ಮತ್ತು ಮಠದ ಎಲ್ಲಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ನರಸಿಂಹವನದ ಗುರು ನಿವಾಸಕ್ಕೆ ತೆರಳಿ ಮಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ, ವಿಧುಶೇಖರಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಯುವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡತಲು ಕೆ.ಎಂ ರಮೇಶ್ ಭಟ್, ಮೇಗಳಬೈಲ್ ಚಂದ್ರಶೇಖರ್, ಉಮೇಶ್ ಪುದವಾಳ್, ಲಕ್ಷ್ಮೀಶ ಅಣ್ಕುಳಿ, ರಾಜ್ಕುಮಾರ್ ಹೆಗ್ಡೆ, ಸುನಿಲ್ ಮಾತೋಳ್ಳಿ ಇದ್ದರು.
Agriculture Minister N. Chaluvarayaswamy visits Sringeri Sharada Peetha
Leave a comment