ಚಿಕ್ಕಮಗಳೂರು : ನ್ಯಾಯಾಲಯದ ವಿಚಾರಣೆ ಮುಗಿಸಿ ವಾಪಸಾಗುತ್ತಿದ್ದ ಯುವಕನ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ರಾಶಿಲ್ ಪಾಷ ಎಂದು ಗುರುತಿಸಲಾಗಿದ್ದು, ಏಳು ತಿಂಗಳ ಹಿಂದೆಯಷ್ಟೇ ಐಶಾ ನಿಬಾ ಖಾನ್ ಎಂಬುವವರನ್ನು ಮದುವೆಯಾಗಿದ್ದರು.
ಆದರೆ ವಿವಾಹವಾದ ಕೆಲವೇ ತಿಂಗಳಲ್ಲಿ ದಂಪತಿಗಳ ನಡುವೆ ವೈಮನಸ್ಸು ಉಂಟಾಗಿದ್ದರಿಂದ, ಪತ್ನಿ ಕಳೆದ ನಾಲ್ಕು ತಿಂಗಳಿನಿಂದ ಪತಿಯನ್ನು ಬಿಟ್ಟು ತವರು ಸೇರಿದ್ದರು. ಅಷ್ಟೇ ಅಲ್ಲದೆ ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ವಿಚ್ಛೇದನ ಮತ್ತು ಜೀವನಾಂಶ ಕೋರಿ ಪತ್ನಿಯು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಪ್ರಕರಣದ ಕಾನೂನು ಹೋರಾಟದ ಭಾಗವಾಗಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ರಾಶಿಲ್ ಪಾಷ ಮರಳಿ ಕೆಲಸಕ್ಕೆ ತೆರಳುತ್ತಿದ್ದಾಗ ನಗರದ ಜೈನ್ ಟೆಂಪಲ್ ಸಮೀಪ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಆಟೋರಿಕ್ಷಾದಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳು ರಾಶಿಲ್ ನನ್ನು ತಡೆದು ಏಕಾಏಕಿ ದಾಳಿ ನಡೆಸಿದ್ದಾರೆ.
ಹಲ್ಲೆಯ ಸಮಯದಲ್ಲಿ ಯುವಕನ ಬೈಕ್ ಕೂಡ ಸಂಪೂರ್ಣವಾಗಿ ಜಖಂಗೊಂಡಿದ್ದು ಈ ಹಲ್ಲೆಯನ್ನು ಪತ್ನಿಯ ಕುಟುಂಬಸ್ಥರೇ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಘಟನೆಯಿಂದ ಗಾಯಗೊಂಡಿರುವ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ತನ್ನ ಮೇಲೆ ಅಟ್ಯಾಕ್ ಮಾಡಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
A young man was fatally attacked by a gang
Leave a comment