ಚಿಕ್ಕಮಗಳೂರು: ತೀವ್ರ ಬರಗಾಲಕ್ಕೆ ತುತ್ತಾಗಿರುವ ಕಡೂರು ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಬೇಕು. ತುರ್ತು ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ಸರ್ಕಾರಕ್ಕೆ ವಸ್ತುನಿಷ್ಠ ವರದಿಯನ್ನು ಜಿಲ್ಲಾಡಳಿತ ಸಲ್ಲಿಸಬೇಕು ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಒತ್ತಾಯಿಸಿದರು.
ಕಡೂರು ತಾಲ್ಲೂಕು ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದೆ. ಡಿ.ಎಂ.ನಂಜುಂಡಸ್ವಾಮಿ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕಾಗಿದೆ. ಇದರ ಜೊತೆಗೆ ಈ ವರ್ಷದ ಬರ ತೀವ್ರ ಸ್ವರೂಪದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ರೈತ ನಾಯಕರು, ಜನಪ್ರತಿನಿಧಿಗಳು, ಸಮಾನ ಮನಸ್ಕರು ಇಡೀ ತಾಲ್ಲೂಕಿನ ಏಳು ಹೋಬಳಿಗಳ 49 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಖುದ್ದಾಗಿ ಹೋಗಿದ್ದೇವೆ. ಅಲ್ಲಿನ ಹೊಲ, ಗದ್ದೆ, ತೋಟಗಳನ್ನು ಕಣ್ಣಾರೆ ಕಂಡಿದ್ದೇವೆ. ನೇರವಾಗಿ ರೈತ ಬಾಯಿಯಿಂದಲೇ ಅವರ ಕಷ್ಟಗಳನ್ನು ಕೇಳಿದ್ದೇವೆ’ ಎಂದು ಹೇಳಿದರು.
ಕಡೂರು ತಾಲ್ಲೂಕಿನಲ್ಲಿ ಈ ಬಾರಿಯ ಮುಂಗಾರು ಸಂಪೂರ್ಣ ವಿಫಲವಾಗಿದೆ. ರೈತರು ಆಕಾಶ ನೋಡಿ ಬೀಜ ಚೆಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ಸರ್ಕಾರದ ಕೆಎಎನ್ಎಂಡಿಸಿ ಅಧಿಕೃತ ಮಾಹಿತಿಯ ಪ್ರಕಾರ ಜೂ.1 ರಿಂದ ಜು.24 ರವರೆಗೆ ತಾಲ್ಲೂಕಿನ ಬಿದ್ದಿರುವ ಮಳೆ ಪ್ರಮಾಣ ಗಮನಿಸಿದರೆ ವಾಡಿಕೆಗಿಂತ ಶೇ 45ರಿಂದ ಶೇ 50ರಷ್ಟು ಕೊರತೆಯಾಗಿದೆ ಎಂದರು.
‘ಮುಂಗಾರು ಪೂರ್ಣವಾಗಿ ಕೈಕೊಟ್ಟಿದ್ದರಿಂದ ರೈತರು ಬಿತ್ತನೆಗೆ ಮುಂದಾಗಿಲ್ಲ. ತಾಲ್ಲೂಕಿನಲ್ಲಿ 40 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ, ಒಂದು ಕಾಳು ಬಿತ್ತನೆಯಾಗಿಲ್ಲ. ಮಳೆ ಬಂದಾಗಲೆಲ್ಲಾ ಬಿತ್ತನೆ ಹದ ಮಾಡಿದರು. ಆದರೆ, ಮತ್ತೆ ಬರಲಿಲ್ಲ. ಇದರಿಂದ ರೈತರು ಸಾಲಗಾರರಾಗಿದ್ದಾರೆ’ ಎಂದರು.
ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆಗಳು ಒಣಗಿ ನೆಲ ಬಿರುಕು ಬಿಟ್ಟಿದೆ. ಮುಖ್ಯ ಕೆರೆಗಳಾದ ಮದಗದ ಕೆರೆ, ಕುಕ್ಕಸಮುದ್ರ ಕೆರೆಯಲ್ಲಿ ಒಂದು ಹನಿ ನೀರಿಲ್ಲ. 1000-1500 ಅಡಿಗಳಷ್ಟು ಆಳಕ್ಕೆ ಕೊರೆಸಿದರೂ ಅಂತರ್ಜಲ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಕಚೇರಿ ಹೊರಡಿಸಿರುವ ಮಾಹಿತಿ 49 ಗ್ರಾಮ ಪಂಚಾಯಿತಿಗಳ ಪೈಕಿ 41 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರು ಸಂಪೂರ್ಣ ಅಲಭ್ಯವಾಗಿದೆ. ನೀರು ಪೂರೈಸುತ್ತಿದ್ದ ಕೊಳವೆಬಾವಿ ಸ್ಥಗಿತಗೊಂಡಿವೆ. ಗ್ರಾಮೀಣ ಜನರು ಕುಡಿಯುವ ನೀರಿಗೆ ಪರದಾಡಬೇಕಾಗಿದೆ ಎಂದರು.
ಮಳೆ ಇಲ್ಲದೆ ಜಾನುವಾರುಗಳಿಗೆ ಮೇವು ಮತ್ತು ನೀರು ಇಲ್ಲದಂತಾಗಿದೆ. ರಾಗಿ ಬಿತ್ತನೆ ಕಡಿಮೆಯಾದ ಕಾರಣ ಜಾನು ವಾರುಗಳಿಗೆ ಮೇವಿಲ್ಲ. ಪಶುಸಂಗೋಪನಾ ಇಲಾಖೆ ಅಂಕಿ ಅಂಶಗಳಂತೆ ಇನ್ನು 31 ವಾರವಾಗುವಷ್ಟು ಮೇವು ದಾಸ್ತಾನಿದೆ. ಪ್ರತಿ ಹೋಬಳಿಯಲ್ಲೂ ಮೇವು ಬ್ಯಾಂಕ್ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಪಿಂಚಣಿದಾರರಿಗೆ ಆದಾಯ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಆದಾಯದ ಮಿತಿಯನ್ನು ₹32 ಸಾವಿರಕ್ಕೆ ನಿಗದಿಪಡಿಸಲಾಗಿದೆ. ತಾಲ್ಲೂಕಿನ 61 ಸಾವಿರ ಫಲಾನುಭವಿಗಳಲ್ಲಿ ಸುಮಾರು 31 ಸಾವಿರ ಜನರಿಗೆ ನಾಲ್ಕು ತಿಂಗಳಿಂದ ಪಿಂಚಣಿ ಬಂದಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಜೆಡಿಎಸ್ ಮುಖಂಡ ಜಗದೀಶ್, ಮುಖಂಡರಾದ ಬಿಸಲೇ ಕೆಂಪರಾಜು, ಕುಮಾರ್, ಪಾಪಣ್ಣ, ವಿರೂಪಾಕ್ಷಪ್ಪ, ಗಂಗಾಧರ್ ನಾಯ್ಸ್, ಮೋಹನ್, ಗಣೇಶ್, ಪ್ರಶಾಂತ್, ಶ್ರೀಧರ್, ಕೃಷ್ಣಮೂರ್ತಿ, ಮಹೇಶ್, ಚೌಳಪ್ಪ ಉಪಸ್ಥಿತರಿದ್ದರು.
Y.S.V. Dutta insists on declaring Kadur taluk a drought-prone taluk
Leave a comment