ಚಿಕ್ಕಮಗಳೂರು: ಪ್ರಸಕ್ತ ರಾಜಕೀಯ ಅಸಮಾನತೆಯನ್ನು ಮತ್ತು ದೌರ್ಜನ್ಯವನ್ನು ಮನಗಂಡು ಪರ್ಯಾಯ ರಾಜಕೀಯದ ಕಡೆಗೆ ಸಮಸ್ತ ದಲಿತ ಸಮುದಾಯದ ಪ್ರಜ್ಞಾವಂತರು ಮರಳಬೇಕಾದ ಅಗತ್ಯ ಇದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಲವಾರು ವರ್ಷಗಳ ಅಧಿಕಾರದಲ್ಲಿ ದಲಿತ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಇಂದಿನವರೆಗೂ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇರುವ ದಲಿತ ಸಮುದಾಯದ ಮುಖಂಡರು ಈ ರಾಜಕೀಯ ಅಸಮಾನತೆಯನ್ನು ಖಂಡಿಸಿ ಪಕ್ಷದಿಂದ ಹೊರಬಂದು ಸ್ವಾಭಿಮಾನದಿಂದ ಸ್ವತಂತ್ರ ರಾಜಕೀಯ ಮಾಡಬೇಕಾಗಿದೆ ಎಂದು ಹೇಳಿದರು.
ದಲಿತ ಸಮುದಾಯವನ್ನು ಪಕ್ಷದಲ್ಲಿ ಗುರ್ತಿಸಿಕೊಂಡಿರುವ ಮುಖಂಡರು ದಿಕ್ಕುತಪ್ಪಿಸಿದಂತಾಗುತ್ತದೆ, ಮುಂದಿನ ಪೀಳಿಗೆಯ ರಾಜಕೀಯ ಪ್ರಾತಿನಿಧ್ಯಕ್ಕೆ ಇದು ಮಾರ್ಗವಾಗಿದ್ದು, ದಸಂಸ ಯಾವುದೇ ಜಾತಿಗೆ ಸಿಕ್ಕಿ ಸ್ಥಾನಮಾನವನ್ನು ಗೌರವಿಸುತ್ತದೆ ಆದರೆ ದಲಿತರ ಓಟು ಪಡೆದು ಅಧಿಕಾರಕ್ಕೆ ಬಂದ ನಂತರ ಸಮುದಾಯವನ್ನು ಮರೆತಿರುವ ಸೂಕ್ತ ಪಾಠ ಕಲಿಸುತ್ತೇವೆಂದು ಎಚ್ಚರಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆ ಕಾಲಘಟ್ಟದ ಪರಿಸ್ಥಿತಿಯನ್ನು ಅರಿತು ಕಾಂಗ್ರೆಸ್ ಪಕ್ಷ ಒಂದು ಸುಡುವ ಮನೆ ಎಂದು ಹೇಳಿದ್ದಾರೆ. ಅದು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತವಾಗಿದ್ದು, ರಾಜಕೀಯ ಅಸಮಾನತೆ, ರಾಜ್ಯದಲ್ಲಿ ಅಧಿಕಾರ ನಡೆಸುವ ಕಾಂಗ್ರೆಸ್ ಪಕ್ಷ ಜಿಲ್ಲೆಯ ದಲಿತ ಬಾಂಧವರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ಸ್ವತಂತ್ರ ಬಂದು ೭೮ ವರ್ಷ ಕಳೆದರೂ ರಾಜಕೀಯ ಪಕ್ಷಗಳಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನಗಳು ಲಭಿಸಿಲ್ಲ, ಅದೇ ರೀತಿ ಜಿಲ್ಲೆಯಲ್ಲಿಯೂ ಕೂಡ ರಾಜಕೀಯ ತಾರತಮ್ಯ ಅನುಸರಿಸಿ ದಲಿತ ಸಮುದಾಯಕ್ಕೆ ಯಾವುದೇ ಸೂಕ್ತ ಸ್ಥಾನಮಾನ ನೀಡದೆ ಸಾಮಾಜಿಕ, ಆರ್ಥಿಕವಾಗಿ ಕಡೆಗಣಿಸಲಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡರುಗಳಾದ ವಿರೂಪಾಕ್ಷ, ಮಂಜುನಾಥ್, ಚಿದಾನಂದ, ಅರುಣ್ಕುಮಾರ್, ಕುಶಾಲ್ ಉಪಸ್ಥಿತರಿದ್ದರು.
Dalit community must return to alternative politics against inequality
Leave a comment