ಚಿಕ್ಕಮಗಳೂರು: ಸಾಮಾಜಿಕ ಪರಿವರ್ತನೆ ಮತ್ತು ಸಾಹಿತ್ಯ ಪರಿವರ್ತನೆಗೆ ಮಡಿವಾಳ ಮಾಚಿದೇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ ಜಾತಿ, ಮತ ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರ ಸಾಮಾಜಿಕ ಕಾಲಘಟ್ಟದಲ್ಲಿ ಅವರ ಅನುಯಾಯಿಯಾಗಿ ತೊಡಗಿಸಿಕೊಳ್ಳುವ ಮಡಿವಾಳ ಮಾಚಿದೇವರು ಸಮಾಜದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದರು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಮಾತನಾಡಿ, ಯಾವುದೇ ಒಂದು ಸಣ್ಣ ಸಮುದಾಯವು ಮುಖ್ಯವಾಹಿನಿಗೆ ಬರಬೇಕಾದರೆ ಮತ್ತು ಉನ್ನತ ಸ್ಥಾನಕ್ಕೇರಬೇಕಾದರೆ ಶಿಕ್ಷಣ ಹಾಗೂ ಉದ್ಯಮ ಎಂಬ ಎರಡು ದಾರಿಗಳು ಅತ್ಯಂತ ಮುಖ್ಯವಾದವು.
ವಚನಗಳ ರಕ್ಷಕ ಮಾಚಿದೇವರ ಕೊಡುಗೆಯನ್ನು ಸ್ಮರಿಸಿದ ಅವರು, ಕಲ್ಯಾಣ ಕ್ರಾಂತಿಯ ಸಮಯದಲ್ಲಿ ವಚನ ಸಾಹಿತ್ಯದ ಮೇಲೆ ಆಕ್ರಮಣವಾದಾಗ ಸುಮಾರು ೨೦,೦೦೦ ವಚನಗಳಿದ್ದ ಕಟ್ಟುಗಳನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ. ಆ ಮೂಲಕ ಬಸವಣ್ಣನವರು ಅವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು ಎಂದರು.
ಮಡಿವಾಳ ಮಾಚಿ ದೇವರ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಪ್ರಾಣಿ-ಪಕ್ಷಿಗಳು ತಮ್ಮ ಸಹಜ ಗುಣಗಳಿಂದ ಗುರಿಯನ್ನು ತಲುಪುತ್ತವೆ. ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಶಿವಪಥದ ಜ್ಞಾನವನ್ನು ಪಡೆಯದಿದ್ದರೆ, ಅಂತಹ ಜೀವನ ಕಾಗೆ-ಕೋಳಿಗಳಿಗಿಂತ ಕರ ಕಷ್ಟ ಎಂದು ಮಾಚಿದೇವರು ಎಚ್ಚರಿಸಿದ್ದಾರೆ.
ತಹಸೀಲ್ದಾರ್ ರೇಷ್ಮಾಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಉಪಾಧೀಕ್ಷಕ ನಾಗರಾಜ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ದೌರ್ಜನ್ಯ ಕಾಯ್ದೆ ಸಮಿತಿ ಸದಸ್ಯ ಲಕ್ಷ್ಮಣ್, ಮಡಿವಾಳ ಸಮಾಜದ ಮುಖಂಡರಾದ ಮಂಜುನಾಥ್, ಶ್ರೀನಿವಾಸ್, ದಕ್ಷಿಣಾಮೂರ್ತಿ, ಪುಟ್ಟರಾಜು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಅವರು ಸ್ವಾಗತಿಸಿದರು. ಸುಜಾತ ಸುರೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Machideva’s contribution to social transformation is immense.
Leave a comment