ಚಿಕ್ಕಮಗಳೂರು: ತಾಲೂಕಿನ ಹಿರೇಕೊಳಲೆ ಗ್ರಾಮದ ದಲಿತರಿಗೆ ಸರಕಾರ ಮಂಜೂರು ಮಾಡಿರುವ ಭೂಮಿ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದಿದ್ದರೆ ಕಂದಾಯ ಇಲಾಖೆ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಕೂರುವುದಾಗಿ ಕರ್ನಾಟಕ ಪ್ರಗತಿಪರ ಸಂಘಟನೆ ಎಚ್ಚರಿಸಿದೆ.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಉಮೇಶ್ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿರೇಕೊಳಲೆ ಗ್ರಾಮದ ಸರ್ವೆ ಸಂಖ್ಯೆ ೩೩ ರಲ್ಲಿ ೧೦ ಮಂದಿ ದಲಿತರಿಗೆ ತಲಾ ೨ ಎಕರೆಯಂತೆ ಸರಕಾರ ೧೯೬೧-೬೨ ನೇ ಸಾಲಿನಲ್ಲಿ ಭೂಮಿ ಮಂಜೂರು ಮಾಡಿದೆ. ಈ ಜಮೀನಿನಲ್ಲಿ ದಲಿತರು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಜಮೀನು ಮಂಜೂರು ಮಾಡಿದ ಕಂದಾಯ ಇಲಾಖೆ ಈವರೆಗೂ ಪಕ್ಕಾಪೋಡಿ ಮಾಡಿಕೊಟ್ಟಿಲ್ಲ. ಈ ಬಗ್ಗೆ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಈ ಮಧ್ಯೆ ಪಕ್ಕದ ಎಸ್ಟೇಟ್ ಮಾಲೀಕನೊಬ್ಬ ದಲಿತರ ೨೦ ಎಕರೆ ಜಮೀನಿನಲ್ಲಿದ್ದ ಸಿಲ್ವರ್ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ್ದಾರೆ. ಈ ಜಮೀನಿನ ಮೇಲೆ ದಲಿತರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಅಲ್ಲದೆ, ಈ ಬಗ್ಗೆ ತಹಶೀಲ್ದಾರ್ ಅವರಿಗೆ ದೂರು ಸಹ ನೀಡಿದ್ದಾರೆ.
ಆದರೂ ಯಾವುದೇ ಪ್ರಯೋಜನವಾಗಿಲ್ಲ. ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಸಿಲ್ವರ್ ಮರ ಕಡಿತಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರುನೀಡಲು ಹೋದರೂ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಆದರೆ, ಖಾಸಗಿ ವ್ಯಕ್ತಿ ದೂರನ್ನು ಆಧರಿಸಿ ದಲಿತರನ್ನು ತಮ್ಮ ಜಮೀನಿಗೆ ಹೋಗದಂತೆ ಇದೇ ಪೊಲೀಸರು ತಡೆಯುತ್ತಾರೆ ಎಂದು ಆರೋಪಿಸಿದರು.
ದಲಿತರ ಪರವಾಗಿ ಸರಕಾರಗಳು ಎಷ್ಟೇ ಕಾನೂನು ಜಾರಿಮಾಡಿದರೂ ಕಂದಾಯ ಇಲಾಖೆ ಅದನ್ನು ಅನುಷ್ಠಾನ ಮಾಡುತ್ತಿಲ್ಲ. ಜಿಲ್ಲೆಯ ಬಹುತೇಕ ದಲಿತರ ಜಮೀನಿಗೆ ಇಂದಿಗೂ ಪೋಡಿಯಾಗಿಲ್ಲ ಎಂದು ಹೇಳಿದರು.
ದಲಿತರಿಗೆ ಆಗಿರುವ ಅನ್ಯಾಯದ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ದಲಿತರಿಗೆ ಮಂಜೂರಾಗಿರುವ ಜಮೀನನ್ನು ಯಾವುದೇ ಒತ್ತಡಕ್ಕೆ ಮಣಿಯದೆ ಕಂದಾಯ ಇಲಾಖೆ ಅವರಿಗೆ ಸೂಕ್ತ ದಾಖಲೆ ಒದಗಿಸಿಕೊಡಬೇಕು. ದಲಿತರ ಮನವಿಗೆ ಸ್ಪಂದಿಸದಿದ್ದರೆ ಕಂದಾಯ ಇಲಾಖೆ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಮುಷ್ಕರ ಹೂಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಸುರೇಶ್, ಪೂರ್ಣೇಶ್, ಪ್ರೇಮ್ಕುಮಾರ್, ನಿಂಗಯ್ಯ, ಮಹೇಂದ್ರ, ಸತೀಶ್, ಉಮೇಶ್ ಮತ್ತಿತರರಿದ್ದರು.
Strike if justice is not provided to Dalits’ land
Leave a comment