ಚಿಕ್ಕಮಗಳೂರು: ಸರಣಿ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಖದೀಮರನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸೆಂಬರ್ 18ರ ರಾತ್ರಿ ಬಾಳೆಹೊನ್ನೂರು ಪಟ್ಟಣದ ಮುಬಾರಕ್ ಹುಸೇನ್ ಎಂಬುವವರ ಅಂಗಡಿಯ ಬೀಗ ಮುರಿದು 20 ಸಾವಿರ ನಗದು ಎರಡು ದುಬಾರಿ ಮೌಲ್ಯದ ವಾಚ್ ಹಾಗೂ ಸಿಸಿ ಕ್ಯಾಮರದ ಡಿವಿಆರ್ ಅನ್ನು ಕಳ್ಳರು ಎಗರಿಸಿದ್ದರು. ಅಲ್ಲದೇ ಎದುರುಗಡೆ ಇದ್ದ ಕಲ್ಮಕ್ಕಿ ವೈನ್ ಶಾಪ್ ಬೀಗ ಒಡೆದು ಮೂರು ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಕಳವು ಮಾಡಿ, ಮತ್ತೊಂದು ದಿನಸಿ ಅಂಗಡಿಯ ರೋಲಿಂಗ್ ಶೆಟರ್ ಮುರಿದು ಎರಡು ಸಾವಿರ ನಗದು ಎಗರಿಸಿ ಕಳ್ಳರು ಕೈಚಳಕ ತೋರಿದ್ದರು.
ಈ ಕುರಿತು ಅಂಗಡಿ ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಬಾಳೆಹೊನ್ನೂರು ಪಿಎಸ್ಐ ರವೀಶ್ ಹಾಗೂ ಸಿಬ್ಬಂದಿಗಳು, ಚಿತ್ರದುರ್ಗ ಮೂಲದ ಕರುಣ ಹಾಗೂ ಹಸೈನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ 3.50 ಲಕ್ಷ ನಗದು, 4.10 ಲಕ್ಷ ಮೌಲ್ಯದ ವಸ್ತುಗಳು ಸೇರಿದಂತೆ ಮಾರುತಿ ಸ್ವಿಫ್ಟ್ ಕಾರನ್ನು ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Leave a comment