ಚಿಕ್ಕಮಗಳೂರು: ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿಗೆ ೪೦ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಫೆ.೯, ೧೦ ಮತ್ತು ೧೧ ರಂದು ಮೂರು ದಿನ ಸಂವಾದ, ವಿಚಾರಗೋಷ್ಠಿ, ಶರಣ ಸಾಹಿತ್ಯ ಸಮಾವೇಶ ಆಯೋಜಿಸಲಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂರು ದಿನ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಸುತ್ತೂರಿನ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ, ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿ ಹಾಗೂ ನಾಡಿನ ಹಲವು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೆ ಸಮಾಜಮುಖಿ ಚಿಂತಕರು, ರೈತ, ದಲಿತ, ಕನ್ನಡ, ಪ್ರಗತಿಪರ ಸಂಘಟನೆಗಳ ಮುಖಂಡರು, ಸಾಹಿತಿಗಳು, ವಿದ್ಯಾರ್ಥಿ ಯುವ ಸಮೂಹ, ವಚನ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಫೆ.೯ ರಂದು ಸಂಜೆ ೫.೩೦ ಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಸವತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳು ಸಾನಿಧ್ಯವಹಿಸಲಿದ್ದಾರೆ. ರಾಜಕೀಯ ಗಣ್ಯರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಸಂಜೆ ೭.೩೦ ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಫೆ.೧೦ ರಂದು ವಿಚಾರ ಸಂಕಿರಣದ ಉದ್ಘಾಟನೆಯನ್ನು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ನೆರವೇರಿಸಲಿದ್ದು, ಗುರುಶಾಂತಪ್ಪ ಆಶಯ ನುಡಿ ನುಡಿಯಲಿದ್ದು, ಜಿಲ್ಲಾಧಿಕಾರಿ ಎಂ.ಎನ್.ನಾಗರಾಜ್ ಅವರು ಘೋಷವಾಕ್ಯ ಅನಾವರಣ ಮಾಡಲಿದ್ದಾರೆ ಎಂದರು.
ಬೆಳಗ್ಗೆ ೧೧.೩೦ ಕ್ಕೆ ವಿಚಾರ ಸಂಕಿರಣ ೧ ರಲ್ಲಿ ನಮ್ಮೊಳಗಿನ ಶೋಧನೆಗೆ ವಚನಗಳ ಓದು ಎಂಬ ವಿಷಯದ ಬಗ್ಗೆ ಸಾಹಿತಿ ಡಾ. ಎಚ್.ಎಸ್.ಅನುಪಮಾ, ವಚನ ಸಂಪಾದನೆಗಳ ಸಾಂಸ್ಕೃತಿಕ ರಾಜಕಾರಣ ವಿಷಯದ ಬಗ್ಗೆ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಈವರೆಗಿನ ಓದು ಮತ್ತು ಹೊಸ ಸಾಧ್ಯತೆ ಬಗ್ಗೆ ಸಾಹಿತಿ ದೇವುಪತ್ತಾರ್ ವಿಷಯ ಮಂಡನೆ ಮಾಡಲಿದ್ದಾರೆ.
ಮಧ್ಯಾಹ್ನ ೨.೩೦ ಕ್ಕೆ ವಚನ ಕ್ರಾಂತಿಯ ಮಂದಣ ಕಥನ ಕುರಿತಂತೆ ಡಾ. ಬಂಜಗೆರೆ ಜಯಪ್ರಕಾಶ್, ವಚನ ಪ್ರತಿರೋಧದ ನೆಲೆಗಳು ಬಗ್ಗೆ ಸಾಹಿತಿ ಮೀನಾಕ್ಷಿ ಬಾಳಿ, ವಚನ ಚಳವಳಿಗಳ ಉಗಮದ ಕಾರಣ, ಸ್ವರೂಪ ಮತ್ತು ಉದ್ದೇಶಗಳು ವಿಷಯದಲ್ಲಿ ಡಾ. ಜೆ.ಎಸ್.ಪಾಟೀಲ್ ಉಪನ್ಯಾಸ ನೀಡುವರು. ಸಂಜೆ ೫ ಕ್ಕೆ ರಾಜ್ಯದ ಎಲ್ಲ ಜಿಲ್ಲಾ ಹಾಲಿ ಹಾಗೂ ಮಾಜಿ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಇದೆ ಎಂದು ಹೇಳಿದರು.
ಫೆ.೧೧ ರಂದು ಬೆಳಗ್ಗೆ ೧೦.೩೦ ಕ್ಕೆ ಡಾ. ಸಿದ್ದನಗೌಡ ಪಾಟೀಲ್ ಅವರು ಶ್ರಮಕ್ಕೆ ವಿಶ್ವಮೌಲ್ಯ ತಂದುಕೊಟ್ಟ ಶರಣ ಸಿದ್ದಾಂತದ ಬಗ್ಗೆ, ಸಮಾಜವಾದದ ನೆಲೆಯಲ್ಲಿ ಶರಣರ ಚಿಂತನೆಗಳ ಬಗ್ಗೆ ವೈಎಸ್ವಿ ದತ್ತಾ ಅವರು, ಶರಣ ತತ್ವ ಅರ್ಥದ ಸಮಾನ ಹಂಚಿಕೆಯ ಮಾರ್ಗದ ಬಗ್ಗೆ ಡಾ.ಬಿ.ಎಲ್.ಶಂಕರ್ ಮಾತನಾಡಲಿದ್ದಾರೆ.
ಮಧ್ಯಾಹ್ನ ೨ ಕ್ಕೆ ಡಾ. ಎಂ.ಎಸ್.ಆಶಾದೇವಿ ಅವರು ವಚನ ಚಳವಳಿ ಆತ್ಮ ನಿರೀಕ್ಷಣೆ, ಪರೀಕ್ಷಣೆ ವಿಷಂiiದ ಬಗ್ಗೆ, ಡಾ. ನಟರಾಜ್ ಬೂದಾಳ್ ಅವರು ವಚನ ಶ್ರವಣ ಧಾರೆಗಳ ಸಂಭೂಮಿ ಬಗ್ಗೆ ಮಾತನಾಡಲಿದ್ದಾರೆ. ಸಂಜೆ ೫.೧೦ ಕ್ಕೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ವಹಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಾಹಿತಿಗಳಾದ ಗೊ.ರು.ಚನ್ನಬಸಪ್ಪ, ಬಸವರಾಜಸಾದರ,ಜಿಲ್ಲಾ ಉಸ್ತುವಾರಿ ಸಚಿವ ಕೆ,ಜೆ.ಜಾರ್ಜ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಗುರುಶಾಂತಪ್ಪ, ನಟರಾಜ್ ಕೊಪ್ಪಲು, ಡಿ.ಎಂ.ಮಂಜುನಾಥಸ್ವಾಮಿ, ವಿಜಯ್ಕುಮಾರ್ ಇದ್ದರು.
Three-day Sharan Literary Conference from Feb. 9
Leave a comment