ಚಿಕ್ಕಮಗಳೂರು-ಸರ್ಕಾರ ಕೃಷಿಕರ ಬದುಕನ್ನು ಹಸನಾಗಿಸಬೇಕೆಂಬ ಉದ್ದೇಶದೊಂದಿಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ನೆರವಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇಂದು ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆದ್ಲೇಹಳ್ಳಿ ಶ್ರೀ ಆಂಜನೇಯಸ್ವಾಮಿ ಯರಳಪ್ಪ ದೇವಸ್ಥಾನ ಬಳಿ ಮತ್ತು ಸಿಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಚೇನಹಳ್ಳಿ ಕಾವಲು ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ವತಿಯಿಂದ ೫೦ ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಸಮೀಪ ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಲೋಲೆವೆಲ್ ಪೈಪ್ ಕಾಸ್ವೇ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬಹು ವರ್ಷಗಳ ಕನಸಾಗಿದ್ದ ಈ ಬೇಡಿಕೆಯನ್ನು ಇಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ರೈತರಿಗೆ ಉಪಯುಕ್ತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರ ನೀಡಿದ ಅನುದಾನದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಕೃಷಿ ಪ್ರಧಾನವಾದ ರೈತರನ್ನು ಅವಲಂಬಿಸಿದ ದೇಶ ಭಾರತ ಎಂದರು.
ಕೆರೆ ತುಂಬಿಸುವ ಯೋಜನೆ, ರೈತರಿಗೆ ಅನುಕೂಲವಾಗುವಂತೆ ರಸ್ತೆಗಳ ನಿರ್ಮಾಣ, ಹಳ್ಳಗಳಿಗೆ ಸೇತುವೆ ನಿರ್ಮಾಣ, ಗ್ರಾಮಗಳಿಗೆ ಅಗತ್ಯ ಇರುವ ಸಮುದಾಯ ಭವನಗಳು ಹೀಗೆ ಬಡವರ ಬದುಕನ್ನು ಕಟ್ಟಿಕೊಡುವ ಮೂಲಕ ಶೋಷಿತ ವರ್ಗದವರನ್ನು ಸಮಾಜದ ಮುನ್ನಲೆಗೆ ತರಲು ಶ್ರಮಿಸುತ್ತಿದ್ದಾರೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಶೋಷಿತ ವರ್ಗದ ಧ್ವನಿಯಾಗಿ ಸಮ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದ ಮಹಾ ಪುರುಷರಾಗಿದ್ದು, ಇವರ ವಿಚಾರಧಾರೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ನಡೆಸುತ್ತಿದ್ದಾರೆಂದು ಶ್ಲಾಘಿಸಿದರು.
ಶೋಷಿತರ ಬದುಕನ್ನು ಹಸನಾಗಿಸಲು ಈ ಸಮುದಾಯವನ್ನು ಸಮಾಜದ ಮುನ್ನಲೆಗೆ ತರಬೇಕೆಂಬ ಉದ್ದೇಶದಿಂದ ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನ ಮಾಡಿದೆ ಎಂದು ಹೇಳಿದರು.
ರೈತರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರಾಗಿ ಮಾಡಿ ಸಮಾಜದಲ್ಲಿ ದೊಡ್ಡ ದೊಡ್ಡ ಹುದ್ದೆಗಳಿಗೆ ಹೋಗಲು ಶ್ರಮಿಸಬೇಕೆಂದು ಮನವಿ ಮಾಡಿದರು.
ಮಾಜಿ ಗ್ರಾ.ಪಂ ಸದಸ್ಯ ಕುಮಾರ್ ಸ್ವಾಗತಿಸಿ ಮಾತನಾಡಿ, ಶಾಸಕ ಹೆಚ್.ಡಿ ತಮ್ಮಯ್ಯನವರ ಪರಿಶ್ರಮದಿಂದ ಅವರ ನೇತೃತ್ವದಲ್ಲಿ ಬಯಲು ಭಾಗದ ಬಹುತೇಕ ಎಲ್ಲಾ ಕೆರೆಗಳು ತುಂಬಿರುವುದು ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಜೊತೆಗೆ ಜಮೀನುಗಳಿಗೆ ಹೋಗಲು ತೊಂದರೆಯಾಗಿದ್ದ ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ನಾಗರಾಳು ಗ್ರಾ.ಪಂ ಅಧ್ಯಕ್ಷೆ ಶೈಲಜಾಸಂತೋಷ್, ನಿಡಘಟ್ಟ ಗ್ರಾ.ಪಂ ಅಧ್ಯಕ್ಷೆ ಸವಿತಾಶಿವಪ್ಪ, ಸದಸ್ಯರುಗಳಾದ ಸುಧಾ, ರುದ್ರಮ್ಮ, ಚಂದ್ರಮ್ಮ, ಜಿ.ಪಂ ಮಾಜಿ ಸದಸ್ಯೆ ಹೇಮಾವತಿ, ಸಂತೋಷ್, ಬಾಬು, ರಾಜು, ನಿಂಗರಾಜು, ವಿಶ್ವನಾಥ್, ರಾಜಣ್ಣ, ಮೋಹನ್ ನಾಯಕ್, ಸಿಂಧಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾನಟೇಶ್, ಸದಸ್ಯರಾದ ಶಿವಮ್ಮ, ಶಕುಂತಲಾಜಯದೇವಪ್ಪ, ಮತ್ತಿತರರು ಉಪಸ್ಥಿತರಿದ್ದರು.
Several pro-people schemes to boost the livelihood of farmers
Leave a comment