ಚಿಕ್ಕಮಗಳೂರು: ಸಂಧ್ಯಾ ಸುರಕ್ಷಾ ಹಾಗೂ ವೃದ್ಧಾಪ್ಯ ವೇತನ ಪಡೆಯುತ್ತಿರುವ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 330 ಗ್ರಾಮ ಪಂಚಾಯ್ತಿಗಳಲ್ಲಿ ಜೂ. 23 ರಂದು ಏಕ ಕಾಲದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತದ ಸರ್ಕಾರ ಸಾಮಾನ್ಯರಿಗೆ ದುರ್ಬಲರಿಗೆ ಬಡವರಿಗೆ ಶಕ್ತಿ ಹೀನರಿಗೆ ಶಕ್ತಿ ನೀಡುವ ಬದಲು ಶಕ್ತಿ ಹೀನರನ್ನಾಗಿ ಮಾಡಿ ದೌರ್ಜನ್ಯ ನಡೆಸುವ ಚಟುವಟಿಕೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು.
14 ಲಕ್ಷ ಸಂಧ್ಯಾ ಸುರಕ್ಷಾ ಫಲಾನುಭವಿಗಳು, 60-65 ವರ್ಷಕ್ಕಿಂತ ಹಿರಿಯರು, 9 ಲಕ್ಷ ವೃದ್ಧಾಪ್ಯ ವೇತನ ಪಡೆಯುತ್ತಿರುವ ಹಿರಿಯರು ಗಮನದಲ್ಲಿಟ್ಟು ಸಂಧ್ಯಾ ಸುರಕ್ಷಾ ಯೋಜನೆಯನ್ನು ಅವರ ಜೀವಿತದ ಕೊನೆಯ ಅವಧಿಯಲ್ಲಿ ಅವರ ಆರೋಗ್ಯದಲ್ಲಿ ತೊಂದರೆಯಾದರೆ, ಮಾತ್ರೆ, ಕರ್ಚಿಗೆ, ಜೀವಕ್ಕೆ ಭದ್ರತೆ ನೀಡಲು ಯಡಿಯೂರಪ್ಪ ಸರ್ಕಾರ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಆದರೆ, ರಾಜ್ಯ ಸರ್ಕಾರ ಕಳೆದ 3-4 ದಿನಗಳ ಹಿಂದೆ ಸಂಧ್ಯಾ ಸುರಕ್ಷಾ ಹಾಗೂ ವೃದ್ಧಾಪ್ಯ ವೇತನ ಪಡೆಯುತ್ತಿರುವವರಲ್ಲಿ ಅನರ್ಹರೆಂದು ಕಂಡು ಬರುತ್ತಿದ್ದಾರೆ. ಇದನ್ನು ಪರಿಶೀಲನೆ ಮಾಡಿ ಎಂದು ಸುತ್ತೋಲೆ ಹೊರಡಿಸಿದೆ ಎಂದರು.
ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 200- 250 ಕ್ಕಿಂತ ಹೆಚ್ಚು ಮಂದಿ ಹಿರಿಯರು ಇದ್ದಾರೆ. ಕಂದಾಯ ಇಲಾಖೆಯವರು ಅವರ ಹತ್ತಿರ ಹೋಗಿ ನೋಡಿ ಪರಿಶೀಲನೆ ಮಾಡಿ ಎಂದರೆ ಏನಾರ್ಥ, ಅವರ ಆದಾಯ ಪರಿಮಿತಿ ಹೆಚ್ಚಾಗಿದೆ. ಎಂಬ ಕಾರಣ ನೀಡಿ ಪಿಂಚಣಿ ರದ್ದುಪಡಿಸುವ ಹುನ್ನಾರ ಇದೆ. ನೂರಾರು ಕೋಟಿ ರುಪಾಯಿ ಬೊಕ್ಕಸದಲ್ಲಿ ಉಳಿಸಿಕೊಳ್ಳಬಹುದು ಎಂಬುದು ರಾಜ್ಯ ಸರ್ಕಾರ ಉದ್ದೇಶವಾಗಿದೆ ಎಂದು ಹೇಳಿದರು.
ಸುಮಾರು 55 ಲಕ್ಷ ಜನ ಪಿಂಚಣಿ ಪಡೆಯುತ್ತಿದ್ದರೆ, ಸಿದ್ದರಾಮಯ್ಯ ಸರ್ಕಾರ 24 ಲಕ್ಷ ಅನರ್ಹರೆಂದು ಹೇಳಿದೆ. ಬಡವರಿಗೆ 2000 ರುಪಾಯಿ ಕೊಟ್ಟು, ಬಡವರ ಮನೆಯಲ್ಲಿರುವ ಹಿರಿಯರು ಪಡೆಯುತ್ತಿರುವ ಪಿಂಚಣಿಯನ್ನು ಹಿಂಪಡೆಯುತ್ತೇವೆ ಎಂಬುದು ಎಷ್ಟು ಸರಿ. ಇದು, ಬೇಜವಬ್ದಾರಿ, ಅಕ್ರಮಣ, ಬಡವರ ವಿರೋಧಿ ನೀತಿ, ಇದರ ವಿರುದ್ಧ ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಸಂವಿಧಾನದ ಆಶಯದಂತೆ ನಡೆದುಕೊಳ್ಳುವವರೆಂದು ರಾಜ್ಯ ಸರ್ಕಾರ ಆಗಾಗ ಪ್ರಶಂಸೆ ಮಾಡಿಕೊಳ್ಳುತ್ತಿದೆ. ಆದರೆ, ಈ ಹಿಂದೆ 9 ಆ್ಯಂಡ್ 11 ಏಕ ವಿನ್ಯಾಸ ನಕ್ಷೆ ಕೊಡಲು ಗ್ರಾಮ ಪಂಚಾಯ್ತಿಗೆ ಆಡಳಿತ ಇತ್ತು. ಆದರೆ, ಸಿದ್ಧರಾಮಯ್ಯ ಸರ್ಕಾರ ಬಂದ ನಂತರ ಏಕ ನಿವೇಶನ ನಕ್ಷೆಯನ್ನು ಸ್ಥಳೀಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿದೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿಯಲ್ಲಿ 9 ಆ್ಯಂಡ್ 11 ತೆಗೆದುಕೊಳ್ಳುವವರು ಪ್ರಾಧಿಕಾರಕ್ಕೆ ಸುತ್ತುತ್ತಿದ್ದಾರೆ. ಪ್ರಾಧಿಕಾರದಲ್ಲಿ ಹಣ ಕೊಟ್ಟವರಿಗೆ 9 ಆ್ಯಂಡ್ 11 ಕೊಡುತ್ತೇವೆಂದು ಹೇಳುತ್ತಿದ್ದಾರೆ. ಅಧಿಕಾರ ವಿಕೇಂದ್ರೀಕರಣದ ಮೂಲ ವ್ಯವಸ್ಥೆ ಹಕ್ಕನ್ನು ಪ್ರಾಧಿಕಾರಕ್ಕೆ ಕೊಡುವುದರ ಮೂಲಕ ಪಂಚಾಯ್ತಿ ವ್ಯವಸ್ಥೆಗೆ ಸಿದ್ಧರಾಮಯ್ಯ ಸರ್ಕಾರ ದೊಡ್ಡ ಕಂಟಕ ತಂದಿದೆ ಎಂದರು.
ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಈ ಸಮಸ್ಯೆಯನ್ನು ಗಮನಕ್ಕೆ ತಂದಿದ್ದೆ. ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಚಿವರ ಗಮನಕ್ಕೂ ತಂದಿದ್ದೆ. ಆದರೆ, ಸರ್ಕಾರ ಮೌನವಾಗಿದೆ. ಹಾಗಾಗಿ ಇದರ ವಿರುದ್ಧ ಹೋರಾಟ ರೂಪಿಸಲಾಗುವುದು. ಒಟ್ಟಾರೆ ಬಡವರ ಕಲ್ಯಾಣ ಯೋಜನೆ ಹಾಗೂ ಪಂಚಾಯ್ತಿಯ ಆಡಳಿತ ವ್ಯವಸ್ಥೆ ಕಸಿಯಲಾಗಿದೆ ಎಂದು ಹೇಳಿದರು.
1000 ರುಪಾಯಿ ಬೆಲೆಯ 100 ರುಪಾಯಿಗೆ ಜನೋಷಧಿಯಲ್ಲಿ ಸಿಗುತ್ತಿತ್ತು. ಇಲ್ಲಿರುವ ನರೇಂದ್ರಮೋದಿ ಪೋಟೋ ಜನರ ಕಣ್ಣಿಗೆ ಬೀಳಬಾರದು ಎಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದ ಸಂಸದರು, ಕೇಂದ್ರದ ಯೋಜನೆಗಳು ಅನುಷ್ಠಾನ ಆಗದಂತೆ ಏನೆಲ್ಲಾ ಮಾಡಬೇಕೋ ಅದನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರ ತನ್ನ ಪಾಲು ಕೊಟ್ಟಿಲ್ಲ ಎಂದು ತಗದೆ ಮಾಡುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ನಮ್ಮ ತೆರಿಗೆ ನಮ್ಮ ಹಕ್ಕೆಂದು ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಜನರು ಗಲಾಟೆ ಮಾಡಿದರೆ ಆಡಳಿತ ವ್ಯವಸ್ಥೆಗೆ ದಕ್ಕೆ ಆಗಲಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
Pensioner revision – Protest in two districts on June 23
Leave a comment