ಚಿಕ್ಕಮಗಳೂರು : ರಾಜ್ಯ ಸರ್ಕಾರ 2024ರ ಸಾಲಿನಲ್ಲಿ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿದ್ದು, ನಕ್ಸಲರ ಶರಣಾಗತಿಗೆ ಪೊಲೀಸ್ ಇಲಾಖೆ ಮೊದಲ ಆದ್ಯತೆ ನೀಡಲಿದೆ. ನಕ್ಸಲರ ಶರಣಾಗತಿಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ನಕ್ಸಲರು ಭೂಗತರಾಗದೇ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಕರೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಕ್ಸಲರ ಶರಣಾಗತಿ ಸಂಬಂಧ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಸರಕಾರ 2024ರ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿದ್ದು, ನಕ್ಸಲರ ಶರಣಾಗತಿಗೆ ಪ್ರಾಮುಖ್ಯತೆ ನೀಡಿದೆ. ಜಿಲ್ಲೆಯಲ್ಲಿ ಈ ಹಿಂದೆಯೂ ನಕ್ಸಲರು ಶರಣಾಗತರಾಗಿದ್ದಾರೆ. ಎಂದ ಅವರು ಕರ್ನಾಟಕ ಸೇರಿ ಹೊರ ರಾಜ್ಯದ ನಕ್ಸಲರಿಗೂ ಶರಣಾಗತಿಗೆ ಅವಕಾಶ ನೀಡಲಾಗಿದೆ ಎಂದರು. ನಕ್ಸಲ್ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಮೂರು ವರ್ಗಗಳನ್ನು ಮಾಡಲಾಗಿದೆ. ಕರ್ನಾಟಕದವರಾಗಿದ್ದು, ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರೆ 7ಲಕ್ಷ ಪರಿಹಾರಧನವನ್ನು ಮೂರು ಹಂತದಲ್ಲಿ ನೀಡಲಾಗುವುದು. ಹೊರ ರಾಜ್ಯದವರಾಗಿದ್ದು, ಸಕ್ರಿಯವಾಗಿದ್ದರೆ ಅವರಿಗೆ 5ಲಕ್ಷ ಹಣವನ್ನು ಮೂರು ಹಂತಗಳಲ್ಲಿ ನೀಡಲಾಗುವುದು.
ನಕ್ಸಲ್ ಬೆಂಬಲಿತರ ಶರಣಾಗತಿಗೆ 2ಲಕ್ಷ ರೂ. ಘೋಷಣೆ ಮಾಡಲಾಗಿದ್ದು, ಮೂರು ಹಂತದಲ್ಲಿ ಪರಿಹಾರ ಹಣವನ್ನು ನೀಡಲಾಗುವುದು ಎಂದರು. ಶರಣಾಗತಿಯಾಗುವ ನಕ್ಸಲರು ತಮ್ಮನ್ನು ನೆರವಾಗಿ ಸಂಪರ್ಕ ಮಾಡಬಹುದು. ಅವರಿಗೆ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ನಕ್ಸಲರನ್ನು ಶರಣಾಗತಿ ಮಾಡಿಸುವವರಿಗೂ ಪೊಲೀಸ್ ಇಲಾಖೆ ಬೆಂಬಲ ನೀಡುತ್ತದೆ ಎಂದ ಅವರು, ಮಾಜಿ ನಕ್ಸಲರ ಸಮಸ್ಯೆ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸಭೆ ಮಾಡುತ್ತೇವೆ. ಶರಣಾಗತರಾಗಿರುವ ಮಾಜಿ ನಕ್ಸಲರು ತಮ್ಮ ಸಮಸ್ಯೆಗಳನ್ನು ಖುದ್ದಾಗಿ ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಬಹುದು ಎಂದರು.
Leave a comment