ಚಿಕ್ಕಮಗಳೂರು: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ಧನ್ (ಪಿಎಂಎಸ್ವೈಎಂ) ವಿಶೇಷ ನೋಂದಣಿ ಅಭಿಯಾನವನ್ನು ಜನವರಿ ೧೫ ರಿಂದ ಮಾರ್ಚ್ ೧೫ರವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಅಸಂಘಟಿತ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡು ಈ ಯೋಜನೆಯ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸಲಹೆ ನೀಡಿದರು.
ಭಾರತ ಸರ್ಕಾರದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ಧನ್ ಯೋಜನೆಗೆ ಒಳಪಡುವ ವಿವಿಧ ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡಲು ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡಿರುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರಿಗೆ ಒದಗಿಸುತ್ತಿರುವ ಪಿಂಚಣಿ ಯೋಜನೆ ಇದಾಗಿದ್ದು, ಗೃಹ ಆಧಾರಿತ ಕಾರ್ಮಿಕರು, ಸಾರಿಗೆ ಚಾಲಕರು, ಕೈಮಗ್ಗ. ಚರ್ಮೋದ್ಯಮ ಇಟ್ಟಿಗೆ ಬಟ್ಟಿ, ನರೇಗಾ ಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಹಾಗೂ ವಿವಿಧ ರೀತಿಯ ಇತರೆ ಉದ್ಯೋಗ ಮಾಡುತ್ತಿರುವವರು ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಫಲಾನುಭವಿಗಳಾಗುವವರು ೧೮ ರಿಂದ ೪೦ ವರ್ಷದೊಳಗಿನ ಅಸಂಘಟಿತ ಕಾರ್ಮಿಕರಾಗಿರಬೇಕು ಹಾಗೂ ಇಎಸ್ಐ, ಪಿಎಫ್, ಎನ್ಪಿಎಸ್ ಹೊಂದಿರಬಾರದು, ಹಾಗೆಯೇ ಆದಾಯ ತೆರಿಗೆ ಪಾವತಿದಾರರೂ ಆಗಿರಬಾರದು ಎಂದ ಜಿಲ್ಲಾಧಿಕಾರಿಗಳು, ಈ ಯೋಜನೆಯಲ್ಲಿ ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರವಾಗಿ ಕೇಂದ್ರ ಸರ್ಕಾರವು ಪಿಂಚಣಿ ಖಾತೆಗೆ ಹಣ ಪಾವತಿಸುತ್ತದೆ. ೬೦ ವರ್ಷ ಪೂರ್ಣಗೊಂಡ ನಂತರ ಅಂತಹ ಕಾರ್ಮಿಕರು ಮಾಸಿಕ ೩ ಸಾವಿರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ವಂತಿಕೆಯು ಕನಿಷ್ಠ ೫೫ ರಿಂದ ಗರಿಷ್ಠ ೨೦೦ ರೂ.ಗಳಾಗಿರುತ್ತದೆ. ವಯಸ್ಸಿಗನುವಾಗಿ ವಂತಿಕೆಯನ್ನು ನಿಗದಿಪಡಿಸಲಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ೪೭೯೦ ಜನ ಕಾರ್ಮಿಕರನ್ನು ನೋಂದಾಯಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯನ್ನು ಕೂಡ ರಚಿಸಲಾಗಿದೆ ಎಂದ ಅವರು, ಸಮಿತಿಯ ಪದಾಧಿಕಾರಿಗಳು ಈ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕವಾದ ಜಾಗೃತಿ ಹಾಗೂ ಪ್ರಚಾರವನ್ನು ಕೈಗೊಂಡು ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆಯ ಲಾಭ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಸಿ.ಸುರೇಶ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಅಸಂಘಟಿತ ವಲಯದ ಕಾರ್ಮಿಕ ಮುಖಂಡರು ವ್ಯಾಪಾರ, ಉದ್ಯೋಗ ಸಂಘದವರು ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
It is necessary to take advantage of the PMSYM scheme.
Leave a comment