ಚಿಕ್ಕಮಗಳೂರು: ಚಿಕ್ಕಮಗಳೂರು: ರೈತ ಮತ್ತು ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಿ ಮಲೆನಾಡಿನ ಜನಜೀವನ ಉಳಿಸುವಂತೆ ಆಗ್ರಹಿಸಿ ಜೂ.೯ ರಂದು ನಗರದಲ್ಲಿ ಬೃಹತ್ ರೈತ ಸಮಾವೇಶ ಏರ್ಪಡಿಸಲಾಗಿದೆ ಎಂದು ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯ್ಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ, ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ದಲಿತ ಮತ್ತು ರೈತ ಸಂಘಟನೆಗಳು ಈ ಸಮಾವೇಶಕ್ಕೆ ಬೆಂಬಲ ನೀಡಿವೆ ಎಂದು ಹೇಳಿದರು.
ಜೂ.೯ ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ತಾಲೂಕು ಕಚೇರಿ ಆವರಣದಿಂದ ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ರೈತರ ಸಮಸ್ಯೆಗಳನ್ನು ಆಲಿಸಿ ಅದನ್ನು ಸದನದಲ್ಲಿ ಚರ್ಚೆಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂಬ ಕಾರಣಕ್ಕೆ ಜಿಲ್ಲೆಯ ಜನಪ್ರತಿನಿಧಿಗಳಾದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಎಚ್.ಡಿ.ತಮ್ಮಯ್ಯ, ಟಿ.ಡಿ. ರಾಜೇಗೌಡ, ಜಿ.ಎಚ್. ಶ್ರೀನಿವಾಸ್, ಕೆ.ಎಸ್.ಆನಂದ್, ನಯನಮೋಟಮ್ಮ, ಎಂಎಲ್ಸಿಗಳಾದ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ ಅವರನ್ನು ಸಮಾವೇಶಕ್ಕೆ ಆಹ್ವಾನಿಸಿದ್ದೇವೆ ಎಂದರು.
ಬೇಡಿಕೆಗಳು : ನಮೂನೆ ೫೭ರಲ್ಲಿ ಪಡೆದಿರುವ ಅರ್ಜಿಗಳಿಗೆ ಸಾಗುವಳಿ ಚೀಟಿ ನೀಡಬೇಕು, ಡೀಮ್ಡ್ ಫಾರೆಸ್ಟ್ ಪರಿಷ್ಕೃತ ಪಟ್ಟಿ ತಯಾರಿಸುವಾಗ ಗ್ರಾಮ ಪಂಚಾಯಿತಿಗಳ ಮೂಲಕ ಪ್ರಚುರಪಡಿಸಬೇಕು. ಸೆಕ್ಷನ್ ೪(೧) ಪ್ರಸ್ತಾವನೆಯಲ್ಲಿರುವ ಎಲ್ಲ ರೈತರ ಜಮೀನು, ಮನೆ, ಗ್ರಾಮ, ಎಲ್ಲ ಜನವಸತಿ ಪ್ರದೇಶವನ್ನು ಮುಕ್ತಮಾಡಿ ಇತರೆ ಅಭಿವೃದ್ಧಿ ಕೆಲಸಗಳಿಗೆ ಜಾಗ ಮೀಸಲಿಡಬೇಕು. ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದ ಸೆಕ್ಷನ್ ೪(೧) ಮೀಸಲು ಅರಣ್ಯ ಪ್ರಸ್ತಾವನೆ ಕೈಬಿಡಬೇಕು. ನಗರಸಭೆ ವ್ಯಾಪ್ತಿಯಿಂದ ೫ ಕಿ.ಮೀ ಮಾರ್ಗವನ್ನು ವಾಯುಮಾರ್ಗ ಎಂದು ಬಳಸದೆ ಭೂಮಾರ್ಗದ ನೇರ ಅಳತೆಯನ್ನು ಪರಿಗಣಿಸಬೇಕು. ಜಿಲ್ಲೆಯ ಇನಾಂ ಭೂಮಿ, ಸೊಪ್ಪಿನ ಬೆಟ್ಟ ಭೂಮಿಗಳ ರೈತರ ಸಮಸ್ಯೆ ಪರಿಹಾರ ಹಾಗೂ ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅಂದಿನ ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದರು.
ಕೆಜಿಎಫ್ ಅಧ್ಯಕ್ಷ ಹಳೆಸೆ ಶಿವಣ್ಣ, ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ನಾಗೇಶ್, ರಂಜಿತ್, ರವಿಕುಮಾರ್ ಮತ್ತಿತರರಿದ್ದರು.
Huge farmers’ convention in the city on June 9th
Leave a comment