ಚಿಕ್ಕಮಗಳೂರು: ರಾಜ್ಯದ ಪರಿಶಿಷ್ಠ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಿದಂತೆ ಪರಿಶಿಷ್ಠ ಪಂಗಡದ ಸಮುದಾಯಕ್ಕೂ ಒಳ ಮೀಸಲಾತಿ ಕಲ್ಪಿಸಲು ಪರಿಶಿಷ್ಠ ಪಂಗಡ ಒಳ ಮೀಸಲಾತಿ ಆಯೋಗ ರಚನೆ ಮಾಡಬೇಕೆಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ನ ಜಂಟಿ ಕಾರ್ಯದರ್ಶಿ ಶ್ರೀನಿವಾಸಗೌಡ್ಲು ಆಗ್ರಹಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ನಾಗರಾಜ್ ಅವರಿಗೆ ಮನವಿ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, 49 ಮೂಲ ಬುಡಕಟ್ಟು ಸಮುದಾಯಕ್ಕೆ ರಾಜ್ಯ ಸರ್ಕಾರವು 2026-27ನೇ ಸಾಲಿನ ಬಜೆಟ್ನಲ್ಲಿ ವಿಶೇಷ ಅನುದಾನ ಕಲ್ಪಿಸಬೇಕು.
ಬುಡಕಟ್ಟು ಸಮುದಾಯದಲ್ಲಿ ಸಾಕಷ್ಟು ಪ್ರಬಲ ಸಮುದಾಯಗಳಿ, ಆ ಸಮುದಾಯಗಳು ಸಾಮಾಜಿಕ, ಆರ್ಥಿಕ ರಾಜಕೀಯವಾಗಿ ಸ್ಥಾನಮಾನ ಪಡೆದುಕೊಂಡಿದ್ದು, ಅತಿ ಕಡಿಮೆ ಇರುವ ಸಮುದಾಯಗಳಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ, ಪರಿಶಿಷ್ಠ ಜಾತಿಗಳಿಗೆ ಕಲ್ಪಿಸಿದಂತೆ ಪರಿಶಿಷ್ಠ ಪಂಗಡದ ಸಮುದಾಯಗಳಿಗೂ ಒಳ ಮೀಸಲಾತಿ ಕಲ್ಪಿಸುವುದಕ್ಕೆ ಪ್ರತ್ಯೇಕ ಆಯೋಗ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಬುಡಕಟ್ಟ ಸಮುದಾಯ ಹೆಚ್ಚಿಸುವ ಪಶ್ಚಿಮಘಟ್ಟದ ಜಿಲ್ಲೆಯಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸರ್ಕಾರವು ನೀಡುವ ಸೌಲಭ್ಯಗಳ ಭೌತಿಕ ಗುರಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಮುಖಂಡ ಪಿ.ರಾಜೇಶ್ ಮಾತನಾಡಿ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಡಿ ನೀಡುವ ಸೌಲಭ್ಯಗಳು ಕೆಲವರಿಗೆ ಸೀಮಿತವಾಗಿವೆ. ಹತ್ತಾರು ವರ್ಷದಿಂದ ಅವರಿಗೆ ಮಾತ್ರ ಸೌಲಭ್ಯಗಳು ದೊರೆಯುತ್ತಿವೆ. ಈ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿಯಿಂದ ಮಂಜೂರು ಮಾಡಿಸುವುದಕ್ಕೆ ದಲ್ಲಾಳಿಗಳು ಸೃಷ್ಟಿಯಾಗಿದ್ದಾರೆ. ಜಿಲ್ಲಾಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ದಲ್ಲಾಳಿಗಳಿಗೆ ಕಡಿವಾಣ ಹಾಕಿ ನಿಜವಾದ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಮಡೆನೆರಳು ಶಂಕರ್, ಸಹ ಕಾರ್ಯದರ್ಶಿ ರಮೇಶ್, ಹಕ್ಕಿ-ಪಿಕ್ಕಿ ಮುಖಂಡ ದಿವಾಕರ್ ಮೊದಲಾದವರಿದ್ದರು.
Demand for formation of Scheduled Caste Internal Reservation Commission
Leave a comment