ಕೊಪ್ಪ : ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಅಟೋಚಾಲಕರೊಬ್ಬರು ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇವರ ಕುಟುಂಬದ ನಿರ್ಧಾರಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ನರಸಿಂಹರಾಜಪುರ ತಾಲ್ಲೂಕು ಬೆಳ್ಳೂರು ಸಮೀಪದ ಹಾತೂರಿನ ಕುಣಿಬೈಲ್ ನಿವಾಸಿ ಮಂಜುನಾಥ್ ಶೆಟ್ಟಿ(೩೫ವ) ಆಟೋಚಾಲಕರಾಗಿದ್ದು ಪತ್ನಿ ಅಪೂರ್ವ ಮತ್ತು ಇಬ್ಬರು ಸಣ್ಣ ಮಕ್ಕಳೊಂದಿಗೆ ಬದುಕು ಕಟ್ಟಿಕೊಂಡಿದ್ದರು. ಇತ್ತೀಚೆಗೆ ಕುದುರೆಗುಂಡಿ ಸಮೀಪ ಆಟೋ ಪಲ್ಟಿಯಾಗಿ ಮಂಜುನಾಥ್ ತಲೆಗೆ ಗಂಭೀರ ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಪರೀಕ್ಷೆ ನಡೆಸಿದ ವೈದ್ಯರು ಗಾಯಾಳುವಿನ ಮೆದುಳು ನಿಷ್ಕ್ರೀಯಗೊಂಡಿದ್ದು ಬದುಕುಳಿಯುವ ಸಾಧ್ಯತೆ ಬಹಳ ಕ್ಷೀಣ ಎಂದು ಕುಟುಂಬಸ್ಥರಿಗೆ ತಿಳಿಸಿದರು. ಇದರಿಂದ ಹತಾಶರಾದ ಕುಟುಂಬಸ್ಥರು ಪ್ರಾಣ ಇರುವವರೆಗೆ ತಮ್ಮ ಹತ್ತಿರದಲ್ಲೇ ಇರಲಿ ಎಂದು ಮಂಜುನಾಥ್ನನ್ನು ಮಣಿಪಾಲದಿಂದ ಕರೆತಂದು ಕೊಪ್ಪದ ಪ್ರಶಮನಿ ಆಸ್ಪತ್ರೆಗೆ ದಾಖಲು ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪದ ಅಮ್ಮ ಫೌಂಡೇಶನ್ನ ಸುಧಾಕರ್ ಶೆಟ್ಟಿಯವರು ಮಂಜುನಾಥ್ ಕುಟುಂಬಸ್ಥರನ್ನು ಸಂಪರ್ಕಿಸಿ ಅಂಗಾಂಗ ದಾನದ ಬಗ್ಗೆ ವಿಚಾರ ತಿಳಿಸಿದರು. ಸಾವಿನ ಅಂಚಿನಲ್ಲಿರುವ ತಮ್ಮ ಪತಿಯ ಅಂಗಾಂಗ ದಾನದಿಂದ ಇನ್ನೂ ನಾಲ್ಕು ಮಂದಿಯ ಬದುಕು ಬೆಳಗಾಗುವುದಾದರೆ ಪತಿಯ ಆತ್ಮಕ್ಕೆ ಶಾಂತಿ ಸಿಗಬಹುದು ಎಂಬ ಭಾವನೆಯೊಂದಿಗೆ ಪತ್ನಿ ಅಪೂರ್ವ ಹಾಗೂ ಮಂಜುನಾಥ್ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದದರು.
ಕಸ್ತೂರಬಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಬುಧವಾರ ಸಂಜೆ ಕೊಪ್ಪದ ಪ್ರಶಮನಿ ಆಸ್ಪತ್ರೆಗೆ ಆಗಮಿಸಿ ಮಂಜುನಾಥ್ ದೇಹದಿಂದ ಕಣ್ಣು, ಹೃದಯ, ಕಿಡ್ನಿ ಮತ್ತು ಲಿವರ ಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲು ಸೂಕ್ತ ತಯಾರಿ ನಡೆಸಿತ್ತು. ಪ್ರಶಮನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಎಚ್.ಜಿ. ಉದಯಶಂಕರ್ ಹಾಗೂ ಆಡಳಿತಾಧಿಕಾರಿ ರೇಖಾ ಉದಯಶಂಕರ್ ಅಗತ್ಯ ಸಹಕಾರ ನೀಡಿದರು.
ಗುರುವಾರ ಸಂಜೆಯ ಹೊತ್ತಿಗೆ ಅಂಗಾಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಬೇರ್ಪಡಿಸಿ ಮಂಗಳೂರು ಮತ್ತು ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಆಂಗಾಂಗ ಸಾಗಾಣೆಗೆ ಪೊಲೀಸ್ ಇಲಾಖೆಯಿಂದ ಉತ್ತಮ ಸಹಕಾರ ಸಿಕ್ಕಿದ ಕಾರಣ ಸಕಾಲಕ್ಕೆ ತಲುಪಿಸಲು ಸಾಧ್ಯವಾಯಿತು.
ಈ ಸಂದರ್ಭದಲ್ಲಿ ಪ್ರಶಮನಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಟಿ.ಡಿ. ರಾಜೇಗೌಡ ಮಂಜುನಾಥ್ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದ ಮಟ್ಟದಲ್ಲಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಕೆ.ಎಸ್. ಸುಬ್ರಹ್ಮಣ್ಯ ಶೆಟ್ಟಿ, ಅಮ್ಮ ಫೌಂಡೇಶನ್ನ ಸುಧಾಕರ್ ಶೆಟ್ಟಿ, ಮೃತರ ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಮಂಜುನಾಥ್ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಕುಣಿಬೈಲಿನ ಅವರ ಮನೆಗೆ ಸಾಗಿಸಲಾಯಿತು. ಗುರುವಾರ ಸಂಜೆ ಕುಣಿಬೈಲಿನಲ್ಲಿ ಅಂತಿಮ ಸಂಸ್ಕಾರ ನೆರವೇರಿತು
Auto driver Manjunath who achieved meaning even in death
Leave a comment