ಚಿಕ್ಕಮಗಳೂರು: ಪ್ರಸ್ತುತ ಸಾಕಷ್ಟು ತೊಂದರೆ, ಸವಾಲುಗಳ ಮಧ್ಯೆ ಕೈಗಾರಿಕೆಗಳನ್ನು ನಡೆಸಬೇಕಾಗಿದ್ದು, ಎಂಎಸ್ಎಂಇಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಉದ್ಯಮಿಗಳು ಮುಂದಾದಾಗ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಬಹುದಾಗಿದೆ ಎಂದು ಬೆಂಗಳೂರಿನ ಟೆಕ್ಸಾಕ್ ಸಿಇಓ ಮತ್ತು ಮುಖ್ಯ ಸಲಹೆಗಾರರಾದ ಸಿದ್ದರಾಜು ತಿಳಿಸಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆಸಿಟಿಯು, ಟೆಕ್ಸಾಕ್ ಜಿಲ್ಲಾ ಕೈಗಾರಿಕಾ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಎಂಎಸ್ಎಂಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ರ್ಯಾಂಪ್ ಯೋಜನೆಯಡಿಯಲ್ಲಿ ಯೋಜನೆಯ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಂದರ್ಭದಿಂದ ತಳಮಟ್ಟಕ್ಕೆ ಇಳಿದಿರುವ ಎಂಎಸ್ಎಂಇ ಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮೇಲೆತ್ತಿದರೆ ಮಾತ್ರ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಸಾಧ್ಯ. ಕೃಷಿ ಮತ್ತು ಎಂಎಸ್ಎಂಇ ಈ ಎರಡೂ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕೆಂದು ಕರೆನೀಡಿದರು.
ಎಂಎಸ್ಎಂಇ ಗಳಲ್ಲಿ ತಯಾರಾಗುವ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾದರೆ ಮಾರುಕಟ್ಟೆ ಸಮಸ್ಯೆ, ಕ್ರೆಡಿಟ್ ಸಮಸ್ಯೆ ಜೊತೆಗೆ ಹಳೆ ತಾಂತ್ರಿಕತೆಯಿಂದ ಎಂಎಸ್ಎಂಇ ಗಳನ್ನು ನಡೆಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದು, ಇದನ್ನು ಡಿಜಿಟಲೀಕರಣದ ಮೂಲಕ ಅತ್ಯಾಧುನಿಕ ಶೈಲಿಯಲ್ಲಿ ವಿನ್ಯಾಸಗೊಳಿಸುವ ಅಗತ್ಯ ಇದೆ ಎಂದು ಹೇಳಿದರು.
ನೂತನ ತಂತ್ರಜ್ಞಾನ ಬಳಕೆ, ಸ್ಕಿಲ್ ಉನ್ನತೀಕರಿಸಲು ಕಾರ್ಮಿಕರಿಗೆ ಉತ್ತೇಜನ ನೀಡಿ ಉತ್ಪನ್ನಗಳನ್ನು ಇಂದು ಮೂರನೇ ಪಾರ್ಟಿಯಿಂದ ರಫ್ತು ಮಾಡಬೇಕಾಗಿದೆ. ನೇರವಾಗಿ ಎಂಎಸ್ಎಂಇ ಗಳೇ ರಫ್ತುಮಾಡುವಂತಾಗಲು ಜಾಗೃತಿ ಅರಿವು ಮೂಡಿಸುವ ಉದ್ದೇಶವೇ ಈ ಕಾರ್ಯಾಗಾರ ಎಂದು ತಿಳಿಸಿದರು.
ಅಧಿಕಾರಿಗಳಿಗೆ ರ್ಯಾಂಪ್ ಮೂಲಕ ಎಂಎಸ್ಎಂಇ ಗಳನ್ನು ಅಭಿವೃದ್ಧಿಪಡಿಸಲು ಇಂತಹ ಕಾರ್ಯಾಗಾರ ನೆರವಾಗಲಿದೆ. ಜಿಲ್ಲೆಯಲ್ಲಿ ಅತೀ ಕಡಿಮೆ ಇಂಡಸ್ಟ್ರಿಗಳಿದ್ದು, ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕಾರಣದಿಂದ ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು.
ಕಡೂರು ಇಂಡಸ್ಟ್ರಿಯಲ್ ಪ್ರದೇಶ ಮತ್ತು ಅಂಬಳೆಯ ಇಂಡಸ್ಟ್ರಿಯಲ್ ಪ್ರದೇಶ ಮಾತ್ರ ಇದ್ದು, ಜಿಲ್ಲೆಯಲ್ಲಿ ಕಾಫಿ, ಏಲಕ್ಕೆ, ಅಡಿಕೆ, ಮೆಣಸು ಮುಂತಾದ ತೋಟಗಾರಿಕೆ ಬೆಳೆಗಳನ್ನು ಸಾಕಷ್ಟು ಇಂಡಸ್ಟ್ರಿಗಳನ್ನು ತೆರೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಸ್ವ-ಸಹಾಯ ಸಂಘಗಳ ಮೂಲಕ ಸಣ್ಣ ಸಣ್ಣ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಪ್ರೋತ್ಸಾಹಿಸಿದಾಗ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆ ತಯಾರಿಸುವ ಅಪ್ಪಳ, ಉಪ್ಪಿನಕಾಯಿ ಸೇರಿದಂತೆ ಸ್ಥಳೀಯ ಉತ್ಪನ್ನಗಳನ್ನು ತಯಾರಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ನೀಡಿದಾಗ ಮಾತ್ರ ಕೈಗಾರಿಕೆಗಳು ಬೆಳೆಯುತ್ತವೆ ಎಂದು ವಿವರಿಸಿದರು.
ಇಂಡಸ್ಟ್ರೀ ಪ್ರಾರಂಭಿಸುವವರಿಗೆ ಉತ್ತೇಜನ ನೀಡಿ ಜಾಗೃತಿ ಮೂಡಿಸಿ, ಪ್ರೋತ್ಸಾಹಿಸಿ ಸಮಸ್ಯೆಗಳು ಎದುರಾದಾಗ ನಿವಾರಣೆಗೆ ಕ್ರಮ ವಹಿಸಬೇಕು. ಈ ಸಂಬಂಧ ಕೇಂದ್ರಸರ್ಕಾರ ೨೮ ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಂ ಮಹೇಶ್ಕುಮಾರ್ ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾದರೆ ಎಂಎಸ್ಎಂಇ ಗಳನ್ನು ಅಭಿವೃದ್ಧಿಪಡಿಸುವ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಅಧಿಕಾರಿಗಳು ಶ್ರಮಿಸಿ ನಿಗದಿತ ಗುರಿ ಸಾಧಿಸಬೇಕೆಂದು ಕರೆನೀಡಿದರು.
ಶೇ.೬೦ ರಷ್ಟು ಕೃಷಿಪ್ರಧಾನವಾಗಿರುವ ಭಾರತ ದೇಶದಲ್ಲಿ ೧೪೦ ಕೋಟಿ ಜನಸಂಖ್ಯೆ ಇದೆ, ಹೆಚ್ಚು ಯುವಜನತೆಯನ್ನು ಹೊಂದಿರುವುದರಿಂದ ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳನ್ನು ಸ್ಥಾಪಿಸುವುದೇ ಪರಿಹಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಇಂದ್ರೇಶ್.ಎನ್.ಎ, ಚೇಂಬರ್ ಆಪ್ ಕಾಮರ್ಸ್ ಅಧ್ಯಕ್ಷ ಮಹೇಶ್.ಆರ್.ಎಂ, ಉಪನಿರ್ದೇಶಕ ಎನ್.ಚಂದ್ರಶೇಖರ್, ಸಹಾಯಕ ನಿರ್ದೇಶಕ ಚಿಕ್ಕಪ್ಪ.ಎಸ್.ಹೆಚ್, ಲೀಡ್ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ಪ್ರಭು, ಕೆ.ಎಸ್.ಎಫ್.ಸಿ ಶಾಖಾ ವ್ಯವಸ್ಥಾಪಕಿ ಪ್ರಮೀಳ.ಹೆಚ್, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಈ.ಈ.ರೇಷ್ಮೆ ಇಲಾಖೆ ಉಪನಿರ್ದೇಶಕಿ ನಂದಿನಿ, ವಾಣಿಜ್ಯತೆರಿಗೆ ಇಲಾಖೆ ಸಹಾಯಕ ಆಯುಕ್ತರು ಚಂದ್ರಶೇಖರ್ ಆಚಾರಿ, ಉದ್ಯಮಿ ಶಾಂತಾರಾಂ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
Authorities should work hard to develop industries
Leave a comment