ಕಡೂರು: ಪರೀಕ್ಷಾ ಭಯ ಹಾಗೂ ಅಧಿಕಾರಿಗಳ ಮಾತಿನಿಂದ ನೊಂದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ದುರದೃಷ್ಟಕರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮ ಒಂದರಲ್ಲಿ ನಡೆದಿದೆ.
ಜನವರಿ 28ರಂದು ಮನೆಯಲ್ಲಿದ್ದ ಕೀಲು ನೋವು ಹಾಗೂ ಉಳುಕಿನ ಮಾತ್ರೆಗಳನ್ನು ಅತಿಯಾಗಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿಯನ್ನು ಕೂಡಲೇ ಕಡೂರು ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ.
ವಿದ್ಯಾರ್ಥಿನಿಯು 2ನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಲ್ಲಿದ್ದಳು ಎನ್ನಲಾಗಿದ್ದು, ಈ ನಡುವೆ ಬಿ.ಇ.ಓ. (ಕ್ಷೇತ್ರ ಶಿಕ್ಷಣಾಧಿಕಾರಿ) ಅವರು ಬಾಲಕಿಯ ಮನೆಗೆ ಭೇಟಿ ನೀಡಿ, “500ಕ್ಕೆ 93 ಅಂಕ ತೆಗೆದಿದ್ದೀಯಾ, ನೀನು ಪಾಸ್ ಆಡ್ತೀಯಾ?” ಎಂದು ಪ್ರಶ್ನಿಸಿ ಬುದ್ದಿ ಹೇಳಿದ್ದರು ಎನ್ನಲಾಗಿದೆ.
ಅಧಿಕಾರಿಯ ಈ ಮಾತಿನಿಂದ ವಿದ್ಯಾರ್ಥಿನಿ ತೀವ್ರವಾಗಿ ಮಂಕಾಗಿದ್ದಳು ಎಂದು ಹೇಳಲಾಗುತ್ತಿದೆ. ಮಗಳ ಸಾವಿನ ಬಗ್ಗೆ ಪೋಷಕರು ಯಾವುದೇ ದೂರು ನೀಡಲು ಮುಂದಾಗಿಲ್ಲವಾದರೂ, “ಬದುಕಿಗೆ ಅಂಕಗಳೇ ಮುಖ್ಯವಲ್ಲ, ಜೀವಕ್ಕೆ ಬೆಲೆಯಿಲ್ಲವೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
Student commits suicide due to exam fear
Leave a comment