ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸೋಲಿನ ಹತಾಶೆಯಿಂದ ಹೊರಬರಲಾರದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರಸರ್ಕಾರದ ವೈಫಲ್ಯದ ವಿರುದ್ಧ ಸಧ್ಯದಲ್ಲೇ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
೨೦೦೪ ರಿಂದ ೨೦೨೩ ರವರೆಗೆ ಬಿಜೆಪಿಯ ಸಿ.ಟಿ. ರವಿ ಶಾಸಕರಾಗಿ ಆಯ್ಕೆಯಾಗಿದ್ದು, ನಿವೇಶನ ರಹಿತರಿಗೆ ನಿವೇಶನ ಹಂಚುವ ಕೆಲಸ ಮಾಡಲಿಲ್ಲ, ನಗರ ಗ್ರಾಮಾಂತರ ಭಾಗದಲ್ಲಿ ೪೦-೫೦ ವರ್ಷಗಳಿಂದ ವಾಸವಿದ್ದ ಯಾರೊಬ್ಬರಿಗೂ ಹಕ್ಕುಪತ್ರ ಕೊಡಿಸುವ ಕೆಲಸವನ್ನು ಮಾಡಲಿಲ್ಲ ಎಂದು ಟೀಕಿಸಿದರು.
ಗ್ರಾಮೀಣ ಭಾಗದ ಜನರಿಗೆ ಏಕ ಸರ್ವೇ ನಂಬರ್ಗಳಲ್ಲಿ ಮಂಜೂರಾದ ಜಮೀನುಗಳಿಗೆ ೧-೫ ಮಾಡಿ ಪೋಡಿ ಮಾಡಲಿಲ್ಲ, ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಂದಾಯ ಗ್ರಾಮ ಮತ್ತು ಉಪಗ್ರಾಮಗಳ ರಚನೆ ಮಾಡಿ, ಹಕ್ಕುಪತ್ರ ನೀಡುವ ಜನಪರ ಕೆಲಸಗಳನ್ನು ಶಾಸಕರು, ಕಂದಾಯ ಸಚಿವ ಕೃಷ್ಣಬೈರೇಗೌಡ ನಡೆಸುತ್ತಿದ್ದಾರೆಂದು ಹೇಳಿದರು.
ರೈತರ ಜಮೀನಿನ್ನು ಪೋಡಿ ಮಾಡಿಸಿ ಎಲ್ಲಾ ಕಂದಾಯ ಇಲಾಖೆ ದಾಖಲೆಗಳು ಆನ್ಲೈನ್ನಲ್ಲಿ ರೈತರಿಗೆ ಸುಲಭವಾಗಿ ಸಿಗುವಂತೆ ಮಾಡಲು ಕ್ರಮವಹಿಸಲಾಗುತ್ತಿದೆ. ೧೯ ವರ್ಷಗಳ ಅಧಿಕಾರದಲ್ಲಿದ್ದಾಗ ಸಿ.ಟಿ. ರವಿ ಜನರ ಮೂಲಭೂತ ಸಮಸ್ಯೆಗಳ ಅರಿವಿಲ್ಲದೆ ಈಗ ಪ್ರತಿಭಟನೆಯ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಇವರ ಆಷಾಢ ಭೂತಿತನಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರು.
ಇದೂವರೆಗೆ ರಾಜ್ಯ, ದೇಶ ಸುತ್ತುತ್ತಿದ್ದ ಇವರು, ಈಗ ಗ್ರಾಮಗಳ ಕಡೆಗೆ ಬರುವಂತಾಗಿದ್ದು, ಪ್ರತೀ ಕುಟುಂಬಕ್ಕೆ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಸಾವಿರಾರು ರೂಪಾಯಿಗಳನ್ನು ನೀಡುತ್ತಿದೆ. ಇದರಿಂದ ಬಡವರ ಬದುಕು ಹಸನಾಗಿದ್ದು, ಮುಂಬರುವ ತಾ.ಪಂ, ಜಿ.ಪಂ ಚುನಾವಣೆಗಳನ್ನು ಎದುರಿಸುವ ಭಯದಿಂದ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವುದು ಪ್ರಜ್ಞಾವಂತ ಮತದಾರರು ಅರಿತಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಡಿಎಪಿ ರಸಗೊಬ್ಬರ, ಗೃಹಬಳಕೆ ಅಡುಗೆ ಅನಿಲ ಮತ್ತಿತರೆ ವಸ್ತುಗಳನ್ನು ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿದ ಅವರು, ಗ್ರಾ.ಪಂ ಯಲ್ಲಿ ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ರಾಜ್ಯಸರ್ಕಾರ ಯಾವುದೇ ಕಾರಣಕ್ಕೂ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತೆರಿಗೆ ಪಾವತಿಸುವವರಿಗೆ, ಸರ್ಕಾರಿ ನೌಕರರಿಗೆ, ಶ್ರೀಮಂತರಿಗೆ ಬಿಪಿಎಲ್ ಪಡಿತರ ಸೌಲಭ್ಯ ಸಿಗಬಾರದು ಎಂಬ ಕಾರಣಕ್ಕೆ ಪರಿಶೀಲನೆಗೆ ಆದೇಶಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಮುನೀರ್ ಅಹಮದ್, ಪ್ರವೀಣ್ ಬೆಟ್ಟಗೆರೆ, ಜಗದೀಶ್, ಪ್ರಕಾಶ್ ಉಪಸ್ಥಿತರಿದ್ದರು.
C.T. Ravi protests due to frustration over defeat
Leave a comment